ಪೊಲೀಸ್‌, ಗೃಹರಕ್ಷಕರಿಗೆ ಖಾಸಗಿ ಆರೋಗ್ಯ ವಿಮೆ: ಎಸ್ಪಿ ಹರಿರಾಮ್‌ ಶಂಕರ್‌

| Published : Nov 15 2025, 02:30 AM IST

ಪೊಲೀಸ್‌, ಗೃಹರಕ್ಷಕರಿಗೆ ಖಾಸಗಿ ಆರೋಗ್ಯ ವಿಮೆ: ಎಸ್ಪಿ ಹರಿರಾಮ್‌ ಶಂಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ನಗರದ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯ ಮಟ್ಟದ ಗೃಹರಕ್ಷಕ ದಳ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ ನೆರವೇರಿತು.

ಪಶ್ಚಿಮ ವಲಯ ಮಟ್ಟದ ಗೃಹರಕ್ಷಕ ದಳ ವೃತ್ತಿಪರ ಕ್ರೀಡಾಕೂಟ ಸಮಾರೋಪ

ಉಡುಪಿ: ಪೊಲೀಸ್ ಇಲಾಖೆಯಂತೆಯೇ ಗೃಹರಕ್ಷಕರಿಗೂ ಯಾವುದೇ ರೀತಿಯ ಆರೋಗ್ಯ ವಿಮೆಗಳು ಸಿಗುವುದಿಲ್ಲ. ಆದ್ದರಿಂದ ಖಾಸಗಿ ಬ್ಯಾಂಕ್‌ಗಳ ಸಹಯೋಗದೊಂದಿಗೆ ಆರೋಗ್ಯ ವಿಮಾ ಪ್ಯಾಕೇಜ್‌ ದೊರಕುವಂತೆ ಮಾಡಲಾಗುವುದು ಜಿಲ್ಲಾ ಪೋಲಿಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದ್ದಾರೆ.ಶುಕ್ರವಾರ ನಗರದ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯ ಮಟ್ಟದ ಗೃಹರಕ್ಷಕ ದಳ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಪೊಲೀಸರಿಗೆ ಮತ್ತು ಗೃಹರಕ್ಷಕರಿಗೆ ಅಫಘಾತ ಅಥವಾ ಅನಾರೋಗ್ಯ ಪೀಡಿತರಾದಾಗ ಚಿಕಿತ್ಸೆಗೆ ಲಕ್ಷಾಂತರ ರು. ಖರ್ಚಾಗುತ್ತದೆ. ತಮ್ಮ ಜೀವಿತಾವಧಿಯಲ್ಲಿ ದುಡಿದ ಹಣ ವೈದ್ಯಕೀಯ ವೆಚ್ಚಗಳಿಗಾಗಿ ಖರ್ಚಾಗುತ್ತವೆ. ಅಕಾಲಿಕ ಮರಣವಾದರೇ ಅವರ ಕುಟುಂಬಿಕರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಖಾಸಗಿ ಬ್ಯಾಂಕ್‌ಗಳ ಸಹಯೋಗದೊಂದಿಗೆ ಆರೋಗ್ಯ ವಿಮಾ ಪ್ಯಾಕೇಜ್ ದೊರಕುವಂತೆ ಮಾಡಲಾಗುವುದು ಎಂದವರು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸಮಾಜದಲ್ಲಿ ತುರ್ತು ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕ್ರೀಡೆಯಿಂದ ದೈಹಿಕವಾಗಿ ಸದೃಢವಾದ ಆರೋಗ್ಯ ಹೊಂದಬಹುದಾಗಿದೆ ಹಾಗೂ ಸಂಘಟಿತರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಗೃಹರಕ್ಷಕ ಜಿಲ್ಲಾ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ, ಅಥ್ಲೆಟಿಕ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.ಜಿಲ್ಲಾ ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ವಂದಿಸಿ, ಬ್ರಹ್ಮಾವರ ಘಟಕದ ಪಿಎಲ್ಸಿ ಸ್ಟೀವನ್ ಪ್ರಕಾಶ್ ನಿರೂಪಿಸಿದರು.

......................ಗೃಹರಕ್ಷಕರಿಗೆ ಎಸ್ಪಿ ಮೆಚ್ಚುಗೆಗೃಹರಕ್ಷಕ ದಳವು ಪೊಲೀಸ್ ಇಲಾಖೆಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುವ ಸಂಸ್ಥೆಯಾಗಿದ್ದು, ಕೊರೋನಾ ಕಾಲದಲ್ಲಿ ಗೃಹರಕ್ಷಕರ ಕಾರ್ಯವೈಖರಿಯು ಜನರ ಮೆಚ್ಚುಗೆ ಪಡೆದಿದೆ. ಹೆಚ್ಚು ಜನಸಂದಣಿ ಕಡೆಗಳಲ್ಲಿ ಗೃಹರಕ್ಷಕ ದಳವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ವಾಹನ ಸಂಚಾರದ ನಿಭಾವಣೆಯಲ್ಲಿ ಪೊಲೀಸರಿಗಿಂತಲೂ ಮುಂದಿದ್ದು, ಖುದ್ದು ಜನರೇ ಗೃಹರಕ್ಷಕರನ್ನು ನಿಯುಕ್ತಿಗೊಳಿಸುವಂತೆ ಕೇಳಿಕೊಳ್ಳುವ ಉದಾಹರಣೆಗಳಿವೆ. ಇದು ಗೃಹರಕ್ಷಕರ ಕರ್ತವ್ಯ ಬದ್ದತೆಗೆ ಹಿಡಿದ ಕೈಗನ್ನಡಿಯಾಗಿದೆ. ವಯಸ್ಸಿನ ಬೇಧವಿಲ್ಲದೆ ಗೃಹರಕ್ಷಕರದಳವು ಹಲವು ಜನರಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ಮೆಚ್ಚುಗೆ ಮಾತುಗಳನ್ನಾಡಿದರು.