ಅಳ್ನಾವರ:

ದೇಶದ ಮಿತಿಮೀರಿದ ಜನಸಂಖ್ಯೆಯು ನೈಸರ್ಗಿಕ ಸಂಪನ್ಮೂಲಗಳ ಮೇಲೆ ತೀವ್ರ ಒತ್ತಡವನ್ನು ಉಂಟು ಮಾಡುತ್ತಿದೆ, ಜನಸಂಖ್ಯಾ ಸ್ಫೋಟ ತಡೆಯದಿದ್ದರೆ ನಿರುದ್ಯೋಗ, ಬಡತನ ಮತ್ತು ಆರೋಗ್ಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಪ್ರತಿಯೊಬ್ಬ ನಾಗರಿಕನು ಸಣ್ಣ ಕುಟುಂಬದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಅಳ್ನಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೇಶವ ಗುಂಜೀಕರ ಹೇಳಿದರು.

ಪಟ್ಟಣದ ದಿ ನ್ಯೂ ಇಂಗ್ಲಿಷ್‌ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಉಪನ್ಯಾಸ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಸಮಸ್ಯೆಯಾಗಿ ಸೃಷ್ಠಿಯಾಗಿರುವ ಜನಸಂಖ್ಯೆ ಹೆಚ್ಚಳವನ್ನು ಸಮತೋಲನಕ್ಕೆ ತರದೇ ಹೋದರೆ ಬದುಕು ದುಸ್ತರವಾಗಲಿದೆ. ಅನಿಯಂತ್ರಿತ ಜನಸಂಖ್ಯೆ ಬೆಳವಣಿಗೆ ದೇಶದ ಸಮಸ್ಯೆಯ ಜತೆಗೆ ಕೌಟುಂಬಿಕ ಸಮಸ್ಯೆಗೂ ಕಾರಣವಾಗಲಿದ್ದು ಇದರ ಬಗ್ಗೆ ಜಾಗೃತಿ ಜತೆಗೆ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು ಎಂದರು.

ಜನಸಂಖ್ಯಾ ಸಂಶೋಧನಾ ಕೇಂದ್ರದ ಪರಿವೀಕ್ಷಕ ಡಾ. ಬಸವರಾಜ ಪುಂಡಪ್ಪನವರ ಮಾತನಾಡಿ, ಜನನ ಮತ್ತು ಮರಣ ಸಂಖ್ಯೆಯ ಸಮಪಾತದ ವ್ಯತ್ಯಾಸ ಮತ್ತು ಬಾಲ್ಯವಿವಾಹ ಹಾಗೂ ಅನಕ್ಷರತೆ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಗಣನೀಯವಾಗಿ ಏರಿಕೆಯಾಗುತ್ತಿರುವ ಜನಸಂಖ್ಯೆ 2045ರ ವೇಳೆಗೆ ಸ್ಥಿರತೆ ಕಾಯ್ದುಕೊಳ್ಳಬಹುದಾಗಿದ್ದು 2065ರ ಹೊತ್ತಿಗೆ ಜನಸಂಖ್ಯೆಯಲ್ಲಿ ಇಳಿಮುಖ ಕಾಣುತ್ತೇವೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಪ್ರಕಾಶ ಜಾನಿಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡಿನ ಪ್ರಾಸ್ತಾವಿಕ ಮಾತನಾಡಿದರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ, ದೀಪಾ ಕಲಾಲ, ತುಕಾರಾಂ ಗೊಂದಳಿ, ಕೆ.ಎ. ಬೈಲೂರ, ಬಿಷ್ಟಪ್ಪ ಕಾತಗಾರ ಇದ್ದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.