ಹೆಸರು ಬೆಳೆಯು 40ರಿಂದ 50 ದಿನಗಳ ಬೆಳೆಯಿದ್ದು, ಬೆಳವಣಿಗೆ ಹಂತದಿಂದ ಹೂವು, ಕಾಯಿ ಕಟ್ಟುವ ಹಂತದಲ್ಲಿದ್ದು, ತೇವಾಂಶದ ಕೊರತೆಯಿಂದ ಬೆಳೆಯು ಕುಂಠಿತಗೊಂಡಿದೆ.

ಗದಗ: ರೈತರು ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ಅಳವಡಿಸಿಕೊಂಡು ಸುಸ್ಥಿರ ಕೃಷಿಯತ್ತ ಒಲವು ತೋರಬೇಕು ಮತ್ತು ಬೆಳೆ ಸಮೀಕ್ಷೆಯನ್ನು ತಕ್ಷಣ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ಗದಗ ತಾಲೂಕಿನ ಚಿಕ್ಕಹಂದಿಗೊಳ, ಕುರ್ತಕೋಟಿ, ಶಿರಹಟ್ಟಿ ತಾಲೂಕಿನ ಮಾಗಡಿ, ಬೆಳ್ಳಟ್ಟಿ, ಮುಂಡರಗಿ ತಾಲೂಕಿನ ಬಾಗೇವಾಡಿ, ಮೇವುಂಡಿ, ರೋಣ ತಾಲೂಕಿನ ಬೆಳವಣಕಿ ಹಾಗೂ ನರಗುಂದ ತಾಲೂಕಿನ ಹದ್ಲಿ ಗ್ರಾಮಗಳಲ್ಲಿ ರೈತರು ಬೆಳೆದಿರುವ ಬೆಳೆಗಳ ಪರಿಸ್ಥಿತಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಜ್ಞಾನಿಗಳ ತಂಡದೊಂದಿಗೆ ಜಂಟಿಯಾಗಿ ಕ್ಷೇತ್ರ ಭೇಟಿ ಕೈಗೊಂಡು ವಿವಿಧ ಬೆಳೆಗಳಲ್ಲಿ ಬಂದ ಕೀಟರೋಗ ಬಗ್ಗೆ ಗಮನಿಸಿ ರೈತರಿಗೆ ಸಲಹೆ ನೀಡಿದರು.

ಹೆಸರು ಬೆಳೆಯು 40ರಿಂದ 50 ದಿನಗಳ ಬೆಳೆಯಿದ್ದು, ಬೆಳವಣಿಗೆ ಹಂತದಿಂದ ಹೂವು, ಕಾಯಿ ಕಟ್ಟುವ ಹಂತದಲ್ಲಿದ್ದು, ತೇವಾಂಶದ ಕೊರತೆಯಿಂದ ಬೆಳೆಯು ಕುಂಠಿತಗೊಂಡಿದೆ. ಪ್ರಮುಖವಾಗಿ ಹಳದಿ ನಂಜಾಣು ರೋಗ ಬಾಧೆ ಬಹಳಷ್ಟು ಕಡೆ ಕಂಡುಬಂದಿದ್ದು, ರೈತರು ಪ್ರಾರಂಭಿಕ ಹಂತದಲ್ಲಿ ಅಂತಹ ರೋಗಪೀಡಿತ ಗಿಡಗಳನ್ನು ಗುರುತಿಸಿ ಕಿತ್ತು ಮಣ್ಣಲ್ಲಿ ಹೂಳಬೇಕು. ನಂತರ 0.3 ಗ್ರಾಂ ಅಸೆಟಮಾಪ್ರೈಡ್ ಅಥವಾ 0.3 ಗ್ರಾಂ ಥೈಯೋಮೆಥೋಕ್ಸಿಮ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. (ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣವನ್ನು ಉಪಯೋಗಿಸಬೇಕು). ಜತೆಗೆ ಪ್ರತಿ ಲೀಟರ್ ನೀರಿಗೆ 3 ಗ್ರಾಂ 13:0:45 ಪೋಟ್ಯಾಷಿಯಂ ನೈಟ್ರೇಟ್ ರಸಗೊಬ್ಬರವನ್ನು ನೀರಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಸರು ಬೆಳೆಯಲ್ಲಿ ಬಿತ್ತನೆಗೆ ಮುಂಚೆ ಪ್ರತಿ ಕೆಜಿ ಬೀಜಕ್ಕೆ 3 ಗ್ರಾಂ ಕ್ಯಾಪ್ಟಾನ್ ಅಥವಾ ಥೈರಾನ್‌ದಿಂದ ಬೀಜೊಪಚಾರ ಮಾಡಬೇಕು ಎಂದರು.

ಈ ವೇಳೆ ಉಪ ಕೃಷಿ ನಿರ್ದೇಶಕಿ ಜಿ.ಎಸ್. ಸ್ಫೂರ್ತಿ, ವಿಜ್ಞಾನಿಗಳಾದ ಡಾ. ಸಿ.ಎಂ. ರಫೀ, ಡಾ. ಸಂಗಶೆಟ್ಟಿ, ಡಾ. ಕಲಾವತಿ, ಡಾ. ಪ್ರಭಾವತಿ ಹಾಗೂ ಇತರರು ಇದ್ದರು.