ಉತ್ಪನ್ನ ಮಾರಾಟವೂ ಕಲೆ

| Published : Mar 29 2025, 12:32 AM IST

ಸಾರಾಂಶ

ಸರಕೊಂದು ಗ್ರಾಹಕನಿಗೆ ತಲುಪಬೇಕೆಂದರೆ ಹಲವು ಮಾರ್ಗಗಳಿವೆ. ಕರಪತ್ರ, ಜಾಹೀರಾತು, ಸೆಲೆಬ್ರಿಟಿಗಳ ಶಿಫಾರಸು, ಬಾಯಿ ಮಾತಿನ ಪ್ರಚಾರದ ಮೂಲಕ ಉತ್ಪನ್ನ ಗ್ರಾಹಕನಿಗೆ ತಲುಪುತ್ತದೆ. ಉತ್ಪನ್ನದ ಉತ್ತರೋತ್ತರ ಬೆಳವಣಿಗೆಗೆ ಗುಣಮಟ್ಟ, ಜನಸಾಮಾನ್ಯರಿಗೆ ಹೊರೆಯಾಗದ, ಉದ್ಯಮಿಗೆ ನಷ್ಟವಾಗದಂತೆ ದರ‌‌ ನಿಗದಿಯೂ ಮುಖ್ಯ.

ಕೊಪ್ಪಳ:

ಮಾರುಕಟ್ಟೆಯಲ್ಲಿ ಉತ್ಪನ್ನವೊಂದನ್ನು ಗ್ರಾಹಕರಿಗೆ ತಲುಪಿಸುವುದು ಸವಾಲಿನ ಕೆಲಸ. ಅದಕ್ಕೂ ಕ್ರಿಯಾಶೀಲತೆ, ಜನರನ್ನು ತಲುಪುವ ಕಲೆ ಗೊತ್ತಿರಬೇಕು ಎಂದು ಸಹಾಯಕ ಪ್ರಾಧ್ಯಾಪಕಿ ಡಾ. ರೂಪಾ ಪಿ.ಸಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಶುಕ್ರವಾರ ನಡೆದ ರತನ್ ಟಾಟಾ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ನಡೆದ ಕಾರ್ಯಕ್ರಮ ಉದ್ಘಾಟನೆ ಹಾಗೂ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಕೊಂದು ಗ್ರಾಹಕನಿಗೆ ತಲುಪಬೇಕೆಂದರೆ ಹಲವು ಮಾರ್ಗಗಳಿವೆ. ಕರಪತ್ರ, ಜಾಹೀರಾತು, ಸೆಲೆಬ್ರಿಟಿಗಳ ಶಿಫಾರಸು, ಬಾಯಿ ಮಾತಿನ ಪ್ರಚಾರದ ಮೂಲಕ ಉತ್ಪನ್ನ ಗ್ರಾಹಕನಿಗೆ ತಲುಪುತ್ತದೆ. ಉತ್ಪನ್ನದ ಉತ್ತರೋತ್ತರ ಬೆಳವಣಿಗೆಗೆ ಗುಣಮಟ್ಟ, ಜನಸಾಮಾನ್ಯರಿಗೆ ಹೊರೆಯಾಗದ, ಉದ್ಯಮಿಗೆ ನಷ್ಟವಾಗದಂತೆ ದರ‌‌ ನಿಗದಿಯೂ ಮುಖ್ಯ ಎಂದು ರೂಪಾ ಅಭಿಪ್ರಾಯಪಟ್ಟರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಟಿ.ವಿ. ವಾರುಣಿ ಪ್ರಾಸ್ತಾವಿಕ ಮಾತನಾಡಿ, ರತನ್ ಟಾಟಾ ಬಡತನದಲ್ಲಿ ಹುಟ್ಟಿ ಬೆಳೆದು ಅನೇಕ ಸವಾಲು ಎದುರಿಸಿ ಉದ್ಯಮಿಯಾಗಿ ಸಾಧನೆ ಮಾಡಿದವರು. ಯಶಸ್ಸಿನ ಜತೆಗೆ ಸಮಾಜಮುಖಿ ಕಾರ್ಯ ರೂಪಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದರು.

ಟಾಟಾ ಅವರು ಬದುಕು ಯುವಪೀಳಿಗೆಗೆ, ಯುವ ಉದ್ಯಮಿಗಳಿಗೆ ಪ್ರೇರಣೆ. ಉದ್ಯಮದ ಕೌಶಲ್ಯ ಕಲಿಸುವ ಯತ್ನವಾಗಿ ಉತ್ಪನ್ನ ಮಾರಾಟ ಮಾಡುವ ಬಗೆ, ನಾನು ಉದ್ಯಮಿಯಾದರೆ ಎನ್ನುವ ವಿಷಯಗಳ ಮೇಲೆ ಭಾಷಣ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಶಿವಮೂರ್ತಿಸ್ವಾಮಿ ಗುತ್ತೂರು ನಿರೂಪಿಸಿದರು. ಡಾ. ವೀರಣ್ಣ ಸಜ್ಜನರ ಸ್ವಾಗತಿಸಿದರು. ಪವಿತ್ರಾ ಹೊಸೂರು ಪ್ರಾರ್ಥಿಸಿದರು. ಬಿ‌.ಡಿ. ಮಾಳೆಕೊಪ್ಪ ವಂದಿಸಿದರು. ಜ್ಞಾನೇಶ್ವರ ಪತ್ತಾರ, ಡಾ. ಗಿರಿಜಾ ತುರಮುರಿ, ಬಾಲಾಜಿ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಆಗಮಿಸಿದ್ದರು. ಕಲ್ಲೇಶ ಅಬ್ಬಿಗೇರಿ, ಫಾಹೀಮಾ ಬೇಗಂ, ಅಶೋಕ ಯಕ್ಲಾಸಪುರ, ಶಿವರಾಮ, ಬಸವರಾಜ ಕರುಗಲ್ ಮತ್ತು ವಿದ್ಯಾರ್ಥಿಗಳು ಇದ್ದರು.