ಓ ನನ್ನ ಚೇತನ ಆಗು ನೀ ಅನಿಕೇತನ

| Published : Aug 06 2025, 01:15 AM IST

ಸಾರಾಂಶ

ಓ ನನ್ನ ಚೇತನ ಆಗು ನೀ ಅನಿಕೇತನ ಶೀರ್ಷಿಕೆ ಅಡಿ ಭಾವಗೀತೆ ಮತ್ತು ಜನಪದ ಗೀತೆಗಳ ಸಂಗೀತ ಸಮ್ಮಿಲನ

ಕನ್ನಡಪ್ರಭ ವಾರ್ತೆ ಮೈಸೂರು

ಜನಚೈತನ್ಯ ಫೌಂಡೇಷನ್ ವತಿಯಿಂದ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಓ ನನ್ನ ಚೇತನ ಆಗು ನೀ ಅನಿಕೇತನ ಶೀರ್ಷಿಕೆ ಅಡಿ ಭಾವಗೀತೆ ಮತ್ತು ಜನಪದ ಗೀತೆಗಳ ಸಂಗೀತ ಸಮ್ಮಿಲನ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮವನ್ನು ಎಂಡಿಎ ಮಾಜಿ ಅಧ್ಯಕ್ಷ ಉದ್ಘಾಟಿಸಿದರು, ಕರ್ನಾಟಕ ರಾಜ್ಯ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜು ವಿ. ಭೈರಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಸಹಕಾರ ಇಲಾಖೆ ಜಂಟಿ ನಿಬಂಧಕ ಬೀರೇಂದ್ರ, ಪ್ರತಿಮಾ ಅರುಣ್‌, ಗಾಯಕ ಅಮ್ಮ ರಾಮಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆದಿವಾಸಿ ನಾಯಕ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.

ಫೌಂಡೇಷನ್‌ ಅಧ್ಯಕ್ಷ ಆರ್‌. ಲಕ್ಷ್ಮಣ್‌ ನೇತೃತ್ವದಲ್ಲಿ ಜನಪ್ರಿಯ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ, ಆರ್. ಲಕ್ಷ್ಮಣ್‌, ಜಾಯ್ಸ್ ವೈಶಾಕ್, ಪುಷ್ಪಲತಾ ಶಿವಕುಮಾರ್, ವೈ.ಎಂ. ನಾಗೇಂದ್ರ, ರವಿರಾಜ್ ಹಾಸು, ಸೌಮ್ಯ ಪ್ರಕಾಶ್, ಶೇಷಾದ್ರಿ, ಡಾ. ತಿರುಮಲೇಶ್, ಶ್ರದ್ಧಾ ರವಿರಾಜ್ ಮೊದಲಾದವರು ಗಾಯನ ಪ್ರಸ್ತುತಪಡಿಸಿದರು. ಎನ್. ಶ್ರೀನಿವಾಸಲು, ಬಿ.ಎಸ್. ವಿಜಯ್, ಆನಂದ್, ಕೆ. ನರಸಿಂಹಮೂರ್ತಿ ಇದ್ದರು.

ಅಂಬೇಡ್ಕರ್‌ ಅವರ ಸಂವಿಧಾನದಿಂದ ನಮಗೆ ಹಕ್ಕುಗಳು ಸಿಕ್ಕಿವೆ- ವದ್ಮಶ್ರೀ ಸೋಮಣ್ಣ

- ಪದ್ಮಶ್ರೀ ಸಿಕ್ಕಿದ್ದು ನನಗಲ್ಲ, ಜನಬೆಂಬಲದಿಂದ ನಡೆಸಿದ ಆದಿವಾಸಿಗಳ ಪರ ಹೋರಾಟಕ್ಕೆ

---

ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದಿಂದಾಗಿ ನಮಗೆ ಹಕ್ಕುಗಳು ಸಿಕ್ಕಿವೆ ಎಂದು ಆದಿವಾಸಿ ಹೋರಾಟಗಾರ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಚ್‌.ಡಿ. ಕೋಟೆ ಮೊತ್ತ ಹಾಡಿಯ ಸೋಮಣ್ಣ ಹೇಳಿದರು.

ಜನಚೇತನ ಫೌಂಡೇಷನ್‌ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆದಿವಾಸಿಗಳು ಯಾವುದೇ ಸೌಲಭ್ಯಗಳಿಲ್ಲದೇ ಕಾಡಂಚಿನಲ್ಲಿ ವಾಸಿಸುತ್ತಿದ್ದರು. ನಾವು ಎಚ್‌.ಡಿ. ಕೋಟೆ ಬಂದು ಹುಲ್ಲು ಮಾರಾಟ ಮಾಡಿ, ಜೀವನ ಸಾಗಿಸಬೇಕಿತ್ತು. ನನ್ನ ತಾಯಿ ಕಷ್ಟ ನೋಡಲಾಗದೇ ನಾನು ಶಾಲೆ ಬಿಟ್ಟು ಜೀತಕ್ಕೆ ಸೇರಿದೆ. ಮನೆಯ ಮಾಲೀಕ ಒಂದು ದಿನ ದೌರ್ಜನ್ಯ ನಡೆಸಿದರು. ಆ ವೇಳೆಗೆ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರು ಜಾರಿ ಮಾಡಿದ ಜೀತವಿಮುಕ್ತ ಕಾಯ್ದೆಯಿಂದ ನಮಗೆ ಅದರಿಂದ ಮುಕ್ತಿ ಸಿಕ್ಕಿತು. ನಂತರ ಪ್ರಗತಿಪರ ಸಂಘಟನೆಗಳು ಸೇರಿದಂತೆ ಜನಬೆಂಬಲದಿಂದ ಆದಿವಾಸಿಗಳ ಪರ ಹೋರಾಟಕ್ಕಿಳಿದೆ. ಅಂಬೇಡ್ಕರ್‌ ಅವರ ರಚಿಸಿರುವ ಸಂವಿಧಾನದಿಂದಾಗಿ ನಮಗೆ ಸಿಗಬೇಕಾದ ಹಕ್ಕುಗಳು ದೊರೆತವು ಎಂದರು. ನನ್ನಂತೆ ಹೋರಾಟ ಮಾಡುತ್ತಿರುವ ಎಲ್ಲರಿಗೂ ಪ್ರಶಸ್ತಿ, ಪುರಸ್ಕಾರಗಳು ಸಿಗಬೇಕು ಎಂದು ಅವರು ಆಶಿಸಿದರು.