ಕನ್ನಡಪ್ರಭ ವಾರ್ತೆ ಉಡುಪಿಸಾಹಿತ್ಯ ಮತ್ತು ಸಾಹಿತ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅನಗತ್ಯವಾದ ಖರ್ಚು ವೆಚ್ಚಗಳನ್ನು ತಗ್ಗಿಸಿ, ಕಾರ್ಯಕ್ರಮಗಳ ಶಿಷ್ಟಾಚಾರದ ಬಗ್ಗೆ ವಿಮರ್ಶಿಸಿ, ಕಾರ್ಯಕ್ರಮಗಳ ಮೂಲ ಉದ್ದೇಶಕ್ಕೆ ಆದ್ಯತೆ ಕೊಟ್ಟಾಗ ಮಾತ್ರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಾರಂಭಗಳು ಯಶಸ್ಸು ಆಗುತ್ತವೆ ಎಂದು ಲೇಖಕಿ, ಸಂಪಾದಕಿ ಸಂಧ್ಯಾ ಪೈ ಹೇಳಿದರು.

ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಸಂಪಾದಕರೊಂದಿಗೆ ಸಂವಾದ ಸರಣಿ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ಕಚೇರಿ ಸಂದರ್ಶಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರೊಡನೆ ಸಮ್ಮೇಳನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನೆಗಳ ಬಗ್ಗೆ ಮಾತುಕತೆ ನಡೆಸಿದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಮಾಧ್ಯಮ ವಕ್ತಾರ ನರಸಿಂಹಮೂರ್ತಿ ರಾವ್, ಕಾಪುತಾಲೂಕು ಘಟಕ ಅಧ್ಯಕ್ಷ ಪುಂಡಲಿಕ ಮರಾಠೆ, ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಶ್ರೀನಿವಾಸ್ ಭಂಡಾರಿ ಮತ್ತು ಕುಂದಾಪುರ ತಾಲೂಕ್ ಕಾರ್ಯದರ್ಶಿ ದಿನಕರ ಶೆಟ್ಟಿ ಉಪಸ್ಥಿತರಿದ್ದರು.