ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 200 ಅನುಭವಿ ವೃತ್ತಿಪರರು ಮತ್ತು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವ ಆಡಿಯಾಲಜಿಸ್ಟ್‌ಗಳು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಇಂಡಿಯನ್ ಸ್ಪೀಚ್– ಲ್ಯಾಂಗ್ವೇಜ್ ಅಂಡ್ ಹಿಯರಿಂಗ್ ಅಸೋಸಿಯೇಷನ್‌ ಮೈಸೂರು ಶಾಖೆ ಸಹಯೋಗದಲ್ಲಿ ಆಯಿಷ್ ಆವರಣದಲ್ಲಿ ಹಿಯರಿಂಗ್ ಹಾರಿಜಾನ್ಸ್ 2025 ಎಂಬ ಎರಡು ದಿನಗಳ ಆರ್ಸಿಐ–ಅನುಮೋದಿತ ರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 200 ಅನುಭವಿ ವೃತ್ತಿಪರರು ಮತ್ತು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವ ಆಡಿಯಾಲಜಿಸ್ಟ್‌ಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ, ಶ್ರವಣ ಆರೋಗ್ಯ ರಕ್ಷಣೆಯಲ್ಲಿನ ಇತ್ತೀಚಿನ ಬೆಳವಣಿಗೆ, ಸವಾಲು ಮತ್ತು ಭವಿಷ್ಯದ ದಿಕ್ಕುಗಳ ಕುರಿತು ಗಂಭೀರ ಚರ್ಚೆ ನಡೆಸಿದರು.ಸಮ್ಮೇಳನವು ಪೂರ್ಣಾಧಿವೇಶನ ಉಪನ್ಯಾಸಗಳು, ತಯಾರಕ ಸಂಸ್ಥೆಗಳ ತಾಂತ್ರಿಕ ಅಧಿವೇಶನ, ಪ್ರಾಯೋಗಿಕ ಮಾಸ್ಟರ್ ಕ್ಲಾಸ್ ತರಬೇತಿ, ಆರು ಕೇಂದ್ರೀಕೃತ ಗುಂಪು ಚರ್ಚೆಗಳು, ಸಮಾನಾಂತರ ವೈಜ್ಞಾನಿಕ ಅಧಿವೇಶನ ಹಾಗೂ ಉದ್ಯೋಗ ಮೇಳವನ್ನು ಒಳಗೊಂಡ ಸಮೃದ್ಧ ಶೈಕ್ಷಣಿಕ ಕಾರ್ಯಕ್ರಮವಾಗಿ ಮೂಡಿಬಂದಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತದ ಮೊದಲಿನ ಖಾಸಗಿ ಆಡಿಯಾಲಜಿ ತಜ್ಞ ಡಾ. ಕಲ್ಯಾಣಿ ಮಾಂಡ್ಕೆ ಅವರು, ದೇಶದಲ್ಲಿ ಶ್ರವಣ ಆರೈಕೆ ಕ್ಷೇತ್ರವು ಕಳೆದ ದಶಕಗಳಲ್ಲಿ ಕಂಡಿರುವ ವಿಕಸನವನ್ನು ವಿವರಿಸಿ, ನೈತಿಕತೆ ಹಾಗೂ ಸಾಕ್ಷ್ಯಾಧಾರಿತ ಚಿಕಿತ್ಸಾ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದರು.ವಿಶ್ವ ಆರೋಗ್ಯ ಸಂಸ್ಥೆಯ ಡಾ.ಬಿ. ಮೊಹಮ್ಮದ್ ಅಶೀಲ್ ಅವರು, ಶ್ರವಣವು ಪರಿಣಾಮಕಾರಿ ಸಂವಹನದ ಮೂಲಾಧಾರವಾಗಿದ್ದು, ಮಕ್ಕಳ ಭಾಷಾ ಮತ್ತು ಮಾತು ಬೆಳವಣಿಗೆಯಿಂದ ಹಿಡಿದು ವಯಸ್ಕರು ಹಾಗೂ ಹಿರಿಯ ನಾಗರಿಕರ ಸಾಮಾಜಿಕ ಭಾಗವಹಿಸುವಿಕೆವರೆಗೆ ಶ್ರವಣ ಸಾಧನಗಳು ಜೀವನಪೂರ್ತಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಆಯಿಷ್ ನಿರ್ದೇಶಕಿ ಡಾ.ಎಂ. ಪುಷ್ಪಾವತಿ ಮಾತನಾಡಿ, ಶ್ರವಣ ಸಾಧನ ಅಳವಡಿಕೆಯೊಂದಿಗೆ ಚಿಕಿತ್ಸೆ ಪೂರ್ಣಗೊಳ್ಳುವುದಿಲ್ಲ, ವಿಶೇಷವಾಗಿ ಮಕ್ಕಳಲ್ಲಿ ಸಾಧನ ಅಳವಡಿಕೆಯ ನಂತರದ ವಾಕ್– ಭಾಷಾ ಚಿಕಿತ್ಸೆ ಮತ್ತು ವ್ಯವಸ್ಥಿತ ಶ್ರವಣ ಪುನರ್ವಸತಿ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.ಮಕ್ಕಳಲ್ಲಿ ಪರಿಣಾಮಕಾರಿ ಭಾಷಾ, ಸಂವಹನ ಮತ್ತು ಶೈಕ್ಷಣಿಕ ಕೌಶಲಗಳ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.ಸಮ್ಮೇಳನದ ಸಂಯೋಜಕ ಡಾ.ಎಂ. ಸಂದೀಪ್ ಮತ್ತು ಡಾ.ಎನ್. ದೇವಿ ಅವರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ವೃತ್ತಿಪರರ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಪರಸ್ಪರ ಜ್ಞಾನ ವಿನಿಮಯ ಉತ್ತೇಜಿಸುವುದು ಹಾಗೂ ದೇಶಾದ್ಯಂತ ಏಕರೂಪದ ಉತ್ತಮ ಚಿಕಿತ್ಸಾ ಪದ್ಧತಿ ರೂಪಿಸುವುದು ಹಿಯರಿಂಗ್ ಹಾರಿಜಾನ್ಸ್ 2025ರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.ಶ್ರವಣ ಆರೋಗ್ಯಕ್ಕೆ ಆದ್ಯತೆ ನೀಡುವುದು, ಶೀಘ್ರ ತಪಾಸಣೆ ನಡೆಸುವುದು ಮತ್ತು ಅರ್ಹ ಆಡಿಯಾಲಜಿಸ್ಟ್‌ ಗಳ ಸಮಯೋಚಿತ ಸಮಾಲೋಚನೆ ಪಡೆಯುವ ಮೂಲಕ ಶ್ರವಣ ದೋಷದ ದೀರ್ಘಕಾಲೀನ ಸಾಮಾಜಿಕ ಪರಿಣಾಮ ಕಡಿಮೆ ಮಾಡಬೇಕು ಎಂಬ ಸಂದೇಶವನ್ನು ಸಮ್ಮೇಳನ ನೀಡಿತು.