ಸಾರಾಂಶ
ಶಿಕ್ಷಕರು ಹೇಳುವ ಪಾಠವನ್ನು ಇಷ್ಟಪಟ್ಟು ಕೇಳಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಜಿಲ್ಲಾ ಡಯಟ್ ಉಪನ್ಯಾಸಕ ಎಂ.ಎಚ್. ಪಾಟೀಲ ಹೇಳಿದರು.
ರಾಣಿಬೆನ್ನೂರು: ಶಿಕ್ಷಕರು ಹೇಳುವ ಪಾಠವನ್ನು ಇಷ್ಟಪಟ್ಟು ಕೇಳಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಜಿಲ್ಲಾ ಡಯಟ್ ಉಪನ್ಯಾಸಕ ಎಂ.ಎಚ್. ಪಾಟೀಲ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂದರ್ಶನ ನಡೆಸಿ ವಿದ್ಯಾಭ್ಯಾಸದ ಕುರಿತು ಚರ್ಚಿಸಿ ಮಾತನಾಡಿದರು. ಜೀವನದಲ್ಲಿ ಯಶಸ್ಸು ಕಾಣಲು ಶಿಕ್ಷಣದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವುದರಲ್ಲಿ ನಿರತರಾಗಬೇಕು. ಮೊಬೈಲ್ ಹಾಗೂ ಟೀವಿ ನೋಡುವುದನ್ನು ಬಿಟ್ಟು ಅಭ್ಯಾಸದ ಕಡೆ ಗಮನ ಹರಿಸಬೇಕು. ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಯಾವುದೇ ಭಯಪಡದೆ ಹಬ್ಬದಂತೆ ಸಂಭ್ರಮಿಸಿ ಪರೀಕ್ಷೆಯನ್ನು ಬರೆಯಬೇಕು. ಅತೀ ಹೆಚ್ಚು ಅಂಕ ಪಡೆದು ತಂದೆ, ತಾಯಿ, ಶಿಕ್ಷಕರಿಗೆ, ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರುವ ಜೊತೆಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳು ನೀವಾಗಬೇಕು ಎಂದರು.ಶಿಕ್ಷಕರೂ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಉತ್ತಮ ಗುಣ್ಣಮಟ್ಟದ ಬೋಧನೆ ಮಾಡಬೇಕು. ಎರಡು ಪಾಠಗಳು ಮುಗಿದ ಮೇಲೆ ಪಾಠಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಕ್ವಿಜ್ ನಡೆಸಬೇಕು. ಬೆಳಗ್ಗೆ, ಸಂಜೆ ಹಾಗೂ ಭಾನುವಾರ ಹೆಚ್ಚುವರಿ ತರಗತಿಗಳನ್ನು ನಡೆಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಮುಖ್ಯೋಪಾಧ್ಯಾಯರಾದ ಮಂಜುಳಾ ಕುಲಕರ್ಣಿ, ದೈಹಿಕ ಶಿಕ್ಷಕಿ ಸುಧಾ, ಸಹ ಶಿಕ್ಷಕರಾದ ಮಹೇಶ ಹುಣಸಿಕಟ್ಟಿ, ನವೀನ್ ಅಂಬಿಗೇರ, ಭರಮೇಶ ಹಿರೆಕೇರೂರ, ವಿಜಯ ಪೂಜಾರ, ಬಸವರಾಜ ಬಾರ್ಕಿ ಮತ್ತಿತರರಿದ್ದರು.