ಕಂಪನಿಗಳಿಂದ ಹತ್ತಿ ಬೀಜ ಖರೀದಿಸುವ ಭರವಸೆ

| Published : Jun 27 2025, 12:48 AM IST

ಸಾರಾಂಶ

ಈಗಾಗಲೇ ಕನಕಗಿರಿ, ಹುಲಿಹೈದರ್, ನವಲಿ ಹೋಬಳಿಗಳಲ್ಲಿ 400 ಎಕರೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆ ಮಾಡಲಾಗಿದೆ. ಇಲ್ಲಿರುವ ಬೀಜಗಳನ್ನು ಕಂಪನಿ ಖರೀದಿಸುತ್ತದೆ. ಕಂಪನಿಗಳಲ್ಲಿ ಪೈಪೋಟಿ ಇರುವುದರಿಂದ ಕೆಲವೊಂದು ಬಾರಿ ತೊಂದರೆಯಾಗುತ್ತದೆ.

ಗಂಗಾವತಿ:

ಕನಕಗಿರಿ ಭಾಗದಲ್ಲಿ ವಿವಿಧ ಕಂಪನಿಗಳು ರೈತರಿಂದ ಹತ್ತಿ ಬೀಜ ಖರೀದಿಸುವುದಿಲ್ಲ ಎನ್ನುವ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ವಡ್ಡರಹಟ್ಟಿ ಜಿಲ್ಲಾ ರೈತ ತರಬೇತಿ ಕೇಂದ್ರದಲ್ಲಿ ವಿವಿಧ ಹತ್ತಿ ಸೀಡ್ಸ್ ಕಂಪನಿಗಳ ಅಧಿಕಾರಿಗಳು ಮತ್ತು ಕನಕಗಿರಿ ತಾಲೂಕಿನ ರೈತರ ಸಭೆ ಜರುಗಿತು.

ರಾಶಿ ಸೀಡ್ಸ್ ಕಂಪನಿ ವ್ಯವಸ್ಥಾಪಕ ಶಿವಕುಮಾರ ಮಾತನಾಡಿ, ಪ್ರಸ್ತುತ ವರ್ಷ ಸ್ವಲ್ಪಮಟ್ಟಿಗೆ ಸಮಸ್ಯೆ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ರೈತರಿಂದ ಹತ್ತಿ ಬೀಜ ಖರೀದಿಸಲಾಗುವುದು ಎಂದು ಹೇಳಿದರು.

ಕಾವೇರಿ ಸೀಡ್ಸ್ ಕಂಪನಿಯ ಬಸವಣೆಪ್ಪ ಪಾಟೀಲ್ ಮಾತನಾಡಿ, ಈಗಾಗಲೇ ಕನಕಗಿರಿ, ಹುಲಿಹೈದರ್, ನವಲಿ ಹೋಬಳಿಗಳಲ್ಲಿ 400 ಎಕರೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆ ಮಾಡಲಾಗಿದೆ. ಇಲ್ಲಿರುವ ಬೀಜಗಳನ್ನು ಕಂಪನಿ ಖರೀದಿಸುತ್ತದೆ. ಕಂಪನಿಗಳಲ್ಲಿ ಪೈಪೋಟಿ ಇರುವುದರಿಂದ ಕೆಲವೊಂದು ಬಾರಿ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಪ್ರಸ್ತುತ ವರ್ಷ ಸಮರ್ಪಕವಾಗಿ ಮಳೆಯಾಗುತ್ತಿದೆ. ರೈತರಿಗೆ ಅನ್ಯಾಯವಾಗುವುದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಕೃಷಿ ಉಪ ನಿರ್ದೇಶಕ ಎಲ್. ಸಿದ್ದೇಶ್ವರ ಮಾತನಾಡಿ, ಕಂಪನಿಗಳು ಬೀಜೋತ್ಪಾದನೆ ವಿಷಯದಲ್ಲಿ ಯಾವ ರೀತಿಯಾಗಿ ಒಡಂಬಡಿಕೆ ಮಾಡಿಕೊಂಡಿರುತ್ತೀರೋ ಅದೇ ರೀತಿಯಾಗಿ ಬೀಜಗಳನ್ನು ಖರೀದಿಸಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು ಎಂದು ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಭೆಗೆ ಆಗಮಿಸದ ಕಂಪನಿಗಳ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು, ನವೀನಕುಮಾರ, ರೈತ ಮುಖಂಡರಾದ ಗಣೇಶ ರೆಡ್ಡಿ, ಹನುಮಂತಪ್ಪ, ಶರಣಪ್ಪ ಗದ್ದಿ, ಭೀಮನಗೌಡ, ಮರಿಸ್ವಾಮಿ ಹಾಗೂ ವಿವಿಧ ಗ್ರಾಮಗಳಿಂದ ರೈತರು ಆಗಮಿಸಿದ್ದರು.