ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ದೊಡ್ಡಮಗ್ಗೆ ಗ್ರಾಪಂ ವ್ಯಾಪ್ತಿಯ 5 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಕೈಗೊಳ್ಳುವ ಸಲುವಾಗಿ 5 ಕೋಟಿ ರು. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದ್ದು, ಅನುದಾನ ಲಭ್ಯತೆ ಮೇಲೆ ಕೆಲಸ ಆರಂಭಗೊಳ್ಳಲಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.ತಾಲೂಕಿನ ದೊಡ್ಡಮಗ್ಗೆ ಗ್ರಾಪಂ ವ್ಯಾಪ್ತಿಯ ಕೊಡಕಹಳ್ಳಿ ಗ್ರಾಮದ ಬಳಿ ನೂತವಾಗಿ 18.50 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೇಮಾವತಿ ಬಲಮೇಲ್ದಂಡೆ ವ್ಯಾಪ್ತಿಯಲ್ಲಿ ಬರುವ ದೊಡ್ಡಮಗ್ಗೆ ಕೆರೆಯಿಂದ ನೀರೆತ್ತಿ ಬರಗೂರು, ಲಕ್ಷ್ಮೀಪುರ, ಕಲ್ಕೆರೆ ಹಾಗೂ ಇತರೆ ಎರಡು ಕೆರೆಗಳಿಗೆ ವರ್ಷದಲ್ಲಿ 120 ದಿನ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದರು.
ಕಣಿಯಾರು ಏತ ನೀರಾವರಿ ಯೋಜನೆ ನನ್ನ ಕನಸಾಗಿತ್ತು. ಆದರೆ ಮಲ್ಲಿಪಟ್ಟಣ ಏತನೀರಾವರಿ ಯೋಜನೆಯಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇರುವುದರಿಂದ ಆ ಕನಸು ನನಸಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಗೆ ದೊಡ್ಡಮಗ್ಗೆ ಗ್ರಾಪಂನ ಕಸವಿಲೇವಾರಿ ಘಟಕ ಮಾದರಿಯಾಗಿದೆ. ಉತ್ತಮವಾಗಿ ಕಟ್ಟಡದ ಕಾಮಗಾರಿ,ನಿರ್ವಹಣೆ ಘಟಕ ಮೂಡಿಬಂದಿದೆ. ಉಳಿದ ಗ್ರಾಪಂಗಳ ಪಿಡಿಒ, ಆಡಳಿತ ಮಂಡಳಿಯನ್ನು ಸ್ಥಳಕ್ಕೆ ಆಹ್ವಾನಿಸಿ ತೋರಿಸುವ ಮೂಲಕ ಇದೇ ನಿಟ್ಟಿನಲ್ಲಿ ಉಳಿದ ಗ್ರಾಪಂಗಳ ವ್ಯಾಪ್ತಿಯಲ್ಲಿಯೂ ಸಹ ಕಸ ವಿಲೇವಾರಿ ಘಟಕ ನಿರ್ಮಿಸಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಕೇವಲ ಕಸ ವಿಲೇವಾರಿ ಘಟಕ ನಿರ್ಮಿಸಿದರೇ ಸಾಲದು, ಬದಲಾಗಿ ಸಮರ್ಪಕವಾಗಿ ನಿರ್ವಹಣೆ ಆಗಬೇಕಿದೆ. ಈ ಘಟಕ ಸುತ್ತಾಮುತ್ತ ಕೃಷಿ ಜಮೀನುಗಳು ಇದ್ದು,ಜನ ಜಾನುವಾರುಗಳು ಕಂಡುಬರುತ್ತವೆ.ಯಾವುದೇ ಸಮಸ್ಯೆ ಎದುರಾಗದಂತೆ ಘಟಕ ಕಾರ್ಯನಿರ್ವಹಿಸಬೇಕಿದೆ ಎಂದು ಸೂಚನೆ ನೀಡಿದರು.ಉತ್ತಮವಾಗಿ ಕಟ್ಟಡವನ್ನು ನಿರ್ಮಿಸಿರುವ ಗುತ್ತಿಗೆದಾರ ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಕೊಡಕಹಳ್ಳಿ ಅಶೋಕ್, ಮುಖಂಡರಾದ ಪಟೇಲ್ ರಾಜೇಗೌಡ, ಜಿಪಂ ಮಾಜಿ ಸದಸ್ಯ ರವಿ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಗ್ರಾಪಂ ಸದಸ್ಯರಾದ ವೇಣು, ರಘು, ರಮೇಶ್, ಜಯಣ್ಣ, ಪ್ರಮೀಳಾ, ಪಿಡಿಒ ನಾಗರಾಜು ಪಾಲ್ಗೊಂಡಿದ್ದರು.