ಸಾರಾಂಶ
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿನ್ನಾಳ ಗ್ರಾಮದ ಬಳಿ ಇರುವ ಸರ್ಕಾರಿ ಜಾಗೆ 186 ಎಕರೆ ಪ್ರದೇಶದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಗಂಗಾವತಿಯಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಹಳೇ ತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಕೊಪ್ಪಳ ವಿವಿ ಸ್ನಾತಕೋತ್ತರ ಕೇಂದ್ರಕ್ಕೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಂಗಾವತಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಒತ್ತು ನೀಡುತ್ತಿದ್ದಾರೆ. ಈ ಹಿಂದೆ ಕೆಎನ್ಜಿ ಕಾಲೇಜಿನಲ್ಲಿ ಪಿಜಿ ತರಗತಿಗಳು ನಡೆಯುತ್ತಿದ್ದವು. ಈಗ ಪ್ರತ್ಯೇಕವಾಗಿ ಹಳೆ ಕಟ್ಟಡದಲ್ಲಿ ಸ್ನಾತಕೋತ್ತರ ತರಗತಿಗಳಾದ ಎಂಎ ಕನ್ನಡ, ಇಂಗ್ಲಿಷ್, ಎಂಕಾಂ ಕೋಸ್ರ್ಗಳು ಪ್ರಾರಂಭವಾಗುತ್ತಿವೆ ಎಂದರು. ಬರುವ ವರ್ಷ ಎಂಎ ಇತಿಹಾಸ ತರಗತಿಗಳು ಪ್ರಾರಂಭವಾಗಲಿದೆ ಎಂದರು.ಕಿನ್ನಾಳ ಬಳಿ ವಿವಿ ಕಟ್ಟಡ:
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿನ್ನಾಳ ಗ್ರಾಮದ ಬಳಿ ಇರುವ ಸರ್ಕಾರಿ ಜಾಗೆ 186 ಎಕರೆ ಪ್ರದೇಶದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಆ ಪ್ರದೇಶದಲ್ಲಿ ವಿಶಾಲವಾದ ಸ್ಥಳ ಇರುವುದರಿಂದ ಸುಂದರವಾಗಿ ಕಟ್ಟಡ ನಿರ್ಮಿಸಬಹುದಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಡಿ.ಕೆ. ರವಿ ಮಾತನಾಡಿ, ಬರುವ ವರ್ಷ ಎಂಎಸ್ಸಿ ಕೋರ್ಸ್ ಪ್ರಾರಂಭಿಸಲಾಗುತ್ತದೆ. ಈಗ ನಡೆಯುವ ಪ್ರತಿ ತರಗತಿಗೂ 60 ವಿದ್ಯಾರ್ಥಿಗಳಿಗೆ ಅವಕಾಶ ಇದೆ ಎಂದರು. ಗಂಗಾವತಿ ನಗರದಲ್ಲಿ ಉತ್ತಮವಾದ ಸ್ಥಳ ಸಿಕ್ಕರೆ ಪಿಜಿ ಕೋರ್ಸ್ಗಳ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರಸಾದ, ಕೆಎನ್ಜಿ ಕಾಲೇಜಿನ ಪ್ರಾಚಾರ್ಯ ಜಾಜಿ ದೇವೇಂದ್ರಪ್ಪ, ಟಿಎಂಎಇ ಸಂಸ್ಥೆಯ ಬಿಇಡಿ ಕಾಲೇಜಿನ ಪ್ರಾಚಾರ್ಯ ಕುಲಕರ್ಣಿ, ಬಿಜೆಪಿ ಮುಖಂಡ ಮನೋಹರಗೌಡ ಹಾಗೂ ಸ್ನಾತಕೋತ್ತರ ಕೇಂದ್ರಗಳ ನಿರ್ದೇಶಕರು ಸೇರಿದಂತೆ ಇದ್ದರು.