ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯಲ್ಲಿ ಜಿಪಂ ಸಿಇಓ ಡಾ.ಆಕಾಶ್ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹರ್‌ಘರ್ ಜಲ್‌ನಡಿ 391 ಕಾಮಗಾರಿಗಳ ಪೈಕಿ, 386 ಕಾಮಗಾರಿಗಳ ಕಾಲಾವಧಿ ವಿಸ್ತರಣೆಗೆ ಕೋರಿ ಗುತ್ತಿಗೆದಾರರು ಪ್ರಸ್ತಾವನೆ ಮನವಿ ಸಲ್ಲಿಸಿದ್ದಾರೆ ಎಂದು ಜಿಪಂ ಸಿಇಓ ಡಾ.ಆಕಾಶ್.ಎಸ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ನೀರ್ ಲ್ಯಾಬ್‌ನಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಳ್ಳಕೆರೆ 105, ಚಿತ್ರದುರ್ಗ 56, ಹಿರಿಯೂರು 46, ಹೊಳಲ್ಕೆರೆ 84, ಹೊಸದುರ್ಗ 68, ಮೊಳಕಾಲ್ಮೂರು 27 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. 7 ದಿನಗಳ ಒಳಗಾಗಿ ಗ್ರಾಪಂಗಳ ಪಿಡಿಓ ಹಾಗೂ ಆಡಳಿತ ಅಧಿಕಾರಿ, ಶಾಖಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ನಮೂನೆ-2 ರಲ್ಲಿ ಧೃಢಿಕರಣ ವರದಿ ನೀಡಬೇಕು ಎಂದು ಸೂಚನೆ ನೀಡಿದರು

ಚಿತ್ರದುರ್ಗ ತಾಲೂಕಿನ ಕೆ.ಬಳ್ಳೆಕಟ್ಟೆ ಗ್ರಾಮದ 239 ಹಾಗೂ ಬೆಟ್ಟದನಾಗೇನಹಳ್ಳಿ ಗ್ರಾಮದ 155 ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳ ವ್ಯತ್ಯಾಸದ ಮೊತ್ತಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಟೆಂಡರ್‌ಗೆ ಶೀಘ್ರವೇ ಕರೆ: ಸ್ವಚ್ಛ ಭಾರತ ಮಿಷನ್ ಅಡಿ ಹಿರಿಯೂರು ತಾಲೂಕಿನ ಬುರಜಿನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಟಿಡಿಪಿ (ಟನ್ಸ್ ಪರ್ ಡೇ) ಸಾಮರ್ಥ್ಯದ ಎಂಆರ್‌ ಎಫ್(ಮೆಟಿರಿಯಲ್ ರಿಕವರಿ ಫೆಸಿಲಿಟಿ) ಘಟಕ ನಿರ್ಮಿಸಲಾಗುತ್ತಿದೆ. ಸದ್ಯ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಯಂತ್ರೋಪಕರಣಗಳ ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಶೀಘ್ರ ಟೆಂಡರ್ ಕರೆಯಲಾಗುವುದು. ಈ ಹಿಂದೆ ಗುತ್ತಿಗೆದಾರಿಗೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಲು ನೀಡಿದ ಕಾಲಾವಧಿಯನ್ನು ವಿಸ್ತರಿಸುವ ಪ್ರಸ್ತಾವನೆಗೆ ಅನುಮೋದನೆಗೆ ನೀಡಲು ಇಲಾಖೆಯಿಂದ ವಿಳಂಬವಾಗಿದ್ದರ ಪರಿಣಾಮ ಸಮಿತಿಯಿಂದ ದಂಡ ರಹಿತವಾಗಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಲಾಗುತ್ತಿದೆ ಎಂದು ಸಿಇಓ ಡಾ.ಆಕಾಶ್.ಎಸ್ ವಿವರಿಸಿದರು.

ಜಿಪಂ ಉಪಕಾರ್ಯದರ್ಶಿ ಎಂ.ಬಾಬು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಸಿ.ಸುನೀಲ್ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಕಾರ್, ಜಲತಜ್ಞ ದೇವರಾಜ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.