ರೌಡಿಗಳಿಂದ ನಮಗೆ ರಕ್ಷಣೆ ನೀಡಿ

| Published : Jun 27 2024, 01:07 AM IST

ಸಾರಾಂಶ

ಹದಿನೈದು ವರ್ಷಗಳ ಹಿಂದೆ ಜಮೀನಿನ ಮಾಲಿಕ ಗಂಗಾಧರಯ್ಯ ಗುಮ್ಮಗೋಳಮಠ ಕೊಲೆಯಾದ ಯೋಗೀಶಗೌಡ ಗೌಡರಗೆ ಕಬ್ಜಾಸಹಿತ ಒಟ್ಟು ಮೊಕ್ತಿಯಾರ ಪತ್ರ (ಜಿಪಿಎ) ಮಾಡಿಕೊಟ್ಟಿದ್ದರು. ನಂತರ ಆ ಜಿಪಿಎ ಆಧಾರದ ಮೇಲೆ ಯೋಗಿಶಗೌಡ ಜಮೀನನ್ನು 52 ನಿವೇಶನಗಳನ್ನಾಗಿ ಪರಿವರ್ತಿಸಿ ಉದಯನಗರವೆಂದು ನಾಮಕರಣ ಮಾಡಿ ಮಾರಾಟ ಮಾಡಿದ್ದರು.

ಧಾರವಾಡ:

ತಮ್ಮನ್ನು ಒಕ್ಕಲೆಬ್ಬಿಸುತ್ತಿರುವ ರೌಡಿಗಳಿಂದ ರಕ್ಷಣೆ ನೀಡುವಂತೆ ಮಾಳಾಪುರ ಪ್ರದೇಶದ ಬಳಿಯ ಉದಯ ನಗರ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿದರು.ಮಾಳಾಪೂರ ಹದ್ದಿನಲ್ಲಿನ ಬ್ಲಾಕ್ ನಂಬರ 142ರಲ್ಲಿನ ಕ್ಷೇತ್ರ 6 ಎಕರೆ 26 ಗುಂಟೆ ಜಮೀನನ್ನು, ಹದಿನೈದು ವರ್ಷಗಳ ಹಿಂದೆ ಜಮೀನಿನ ಮಾಲಿಕ ಗಂಗಾಧರಯ್ಯ ಗುಮ್ಮಗೋಳಮಠ ಕೊಲೆಯಾದ ಯೋಗೀಶಗೌಡ ಗೌಡರಗೆ ಕಬ್ಜಾಸಹಿತ ಒಟ್ಟು ಮೊಕ್ತಿಯಾರ ಪತ್ರ (ಜಿಪಿಎ) ಮಾಡಿಕೊಟ್ಟಿದ್ದರು. ನಂತರ ಆ ಜಿಪಿಎ ಆಧಾರದ ಮೇಲೆ ಯೋಗಿಶಗೌಡ ಜಮೀನನ್ನು 52 ನಿವೇಶನಗಳನ್ನಾಗಿ ಪರಿವರ್ತಿಸಿ ಉದಯನಗರವೆಂದು ನಾಮಕರಣ ಮಾಡಿ ಮಾರಾಟ ಮಾಡಿದ್ದರು. ಆ ನಿವೇಶನ ಖರೀದಿಸಿದ ನಾವು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ನಿವಾಸಿಗಳ ಹೋರಾಟ ಫಲವಾಗಿ ವಿದ್ಯುತ್, ನೀರು ಸಂಪರ್ಕ, ರಸ್ತೆ, ಒಳಚರಂಡಿ ನಿರ್ಮಾಣವಾಗಿದ್ದು ಇದೆ. ಆದರೆ, ಈಗ ರೆಹಮತ್‌ಉಲ್ಲಾ ಗೊಲಂದಾಜ್ ಎಂಬುವರು ತಮಗೆ ಜಮೀನಿನ ಮೂಲ ಮಾಲಿಕರು ಒಟ್ಟು ಮೊಕ್ತಿಯಾರ ಪತ್ರ (ಜಿಪಿಎ) ಮಾಡಿಕೊಟ್ಟಿದ್ದಾರೆ. ಸದರಿ ಜಮೀನಿನ ಮಾಲಿಕತ್ವದ ನಮ್ಮದಾಗಿದ್ದು, ನೀವು ಜಾಗ ತೊರೆಯಬೇಕು’ ಎಂದು ಒತ್ತಡ ತರುತ್ತಿದ್ದಾರೆ. ಇದಕ್ಕೆ ವಿರೋಧಿಸಿದರೆ ಧಮಕಿ ಹಾಕುತ್ತಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು. ನಮಗೆ ನಿವೇಶನ ಮಾರಾಟ ಮಾಡಿದ ಯೋಗೀಶಗೌಡ ಗೌಡರ 2016ರಲ್ಲಿ ನಿಧನರಾಗಿದ್ದಾರೆ. ಜಮೀನಿನ ಮಾಲಿಕರಾದ ಗಂಗಾಧರಯ್ಯ ಗುಮ್ಮಗೋಳಮಠ ಅವರು ಯೋಗಿಶಗೌಡರ ಮಾತ್ರವಲ್ಲದೇ ರೆಹಮತ್‌ಉಲ್ಲಾ ಗೊಲಂದಾಜ್‌ಗೆ ಜಿಪಿಎ ಮಾಡಿಕೊಟ್ಟಿದ್ದು ಇತ್ತೀಚೆಗೆ ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಸಾಲ ಮಾಡಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡ ನಮಗೆ ದಿಕ್ಕು ತೋಚದಂತಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ ಸಚಿವರು ಅಕ್ರಮ ಸಕ್ರಮ ನಿವೇಶನಗಳನ್ನು ಏತಕ್ಕೆ ಖರೀದಿಸಿದಿರಿ ಎಂದು ಮರಳಿ ನಿವಾಸಿಗಳನ್ನು ಪ್ರಶ್ನಿಸಿದರು.