- ಕೃಷಿ ಮೇಳ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅಭಿಮತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕೃಷಿ ಜಮೀನುಗಳಿಗೆ ಅತಿ ಹೆಚ್ಚು ರಾಸಾಯನಿಕ ಗೊಬ್ಬರ, ಔಷಧಿ ಬಳಸಾಗುತ್ತಿದೆ. ಪರಿಣಾಮ ಕೃಷಿಭೂಮಿ ತನ್ನ ಸತ್ವ ಕಳೆದುಕೊಂಡು ಆಹಾರ ವಿಷಪೂರಿತವಾಗಿದೆ. ಈ ಬೆಳವಣಿಗೆ ಸೂಕ್ತವಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಪಟ್ಟಣ ಹಿರೇಕಲ್ಮಠದಲ್ಲಿ ಶ್ರೀಮಠದ ಲಿಂಗೈಕ್ಯ ಗುರುಗಳ ಪುಣ್ಯಸ್ಮರಣೆ ಹಾಗೂ ಚಂದ್ರಸ್ಮರಣೆ-2026 ರಾಜ್ಯಮಟ್ಟದ ಕೃಷಿ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಯವ ಕೃಷಿ ಪದ್ದತಿಯಿಂದ ಮಾತ್ರ ಮಣ್ಣಿನ ಆರೋಗ್ಯ ಸಂರಕ್ಷಿಸಲು ಸಾಧ್ಯ. ಹಾಗಾಗಿ ಸಾವಯವ ಕೃಷಿಗೆ ಸರ್ಕಾರ ಸೇರಿದಂತೆ ಎಲ್ಲರೂ ಪ್ರೋತ್ಸಾಹಿಸಬೇಕು. ಸಾವಯವ ಕೃಷಿ ಪದ್ಧತಿಯಿಂದ ತಕ್ಷಣಕ್ಕೆ ಲಾಭ ಸಿಗದಿದ್ದರೂ ಕ್ರಮೇಣ ನಿರಂತರ ಲಾಭಕ್ಕೇನೂ ಕೊರತೆ ಇಲ್ಲ ಎಂದರು.


ಇತ್ತೀಚಿನ ದಿನಗಳಲ್ಲಿ ಯುವಸಮೂಹ ಪಟ್ಟಣದ ವ್ಯಾಮೋಹಕ್ಕೆ ಆಕರ್ಷಿತರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಮುಂದೊಂದು ದಿನ ಹಳ್ಳಿಗಳಲ್ಲಿ ಹೊಲ- ಗದ್ದೆಗಳಲ್ಲಿ ಕೆಲಸ ಮಾಡಲು ಕೃಷಿಕರೇ ಸಿಗದಂತಹ ಕಾಲ ಬರಬಹುದು ಎಂದು ಹೇಳಿದರು.

ಭಾರತದಲ್ಲಿ ಮಠಾಧೀಶರು, ಸಾಧು-ಸಂತರು ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಇದರಿಂದ ದೇಶದಲ್ಲಿ ನೆಮ್ಮದಿ ಬದುಕು ಕಂಡುಕೊಂಡಿದ್ದೇವೆ. ಈಗ ಒಂದೇ ಧರ್ಮದವರು ಹೊಡೆದಾಡುವ ಕಾಲ ಬಂದಿದೆ. ಇದಕ್ಕೆ ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳೇ ಸಾಕ್ಷಿ ಎಂದ ಅವರು, ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಗುಣ, ತಾಳ್ವೆ ಬೆಳೆಸಿಕೊಂಡರೆ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರೈತರ ಬದುಕು ಹಸನಾಗಲು ಸರ್ಕಾರಗಳು ಮುಖ್ಯವಾಗಿ ಸಮರ್ಪಕ ನೀರು, ವಿದ್ಯುತ್ ನೀಡಬೇಕು. ಆಗ ರೈತರೇ ಸರ್ಕಾರಗಳಿಗೆ ಸಾಲ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ ಅವರು ಈಶ್ವರಪ್ಪ ಅವರಿಗೆ ಮರದ ನೇಗಿಲು ನೀಡಿ ಸನ್ಮಾನಿಸಿದರು. ಗೌರಮಠ ಕರ್ಜಗಿ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ, ಸಾನ್ನಿಧ್ಯ ವಹಿಸಿದ್ದರು. ವಿಪ ಸದಸ್ಯ ಡಾ.ಧನಂಜಯ ಸರ್ಜಿ, ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್, ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

- - -

-3ಎಚ್.ಎಲ್.ಐ2:

ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ಸರಪ್ಪ ಅವರಿಗೆ ಹಿರೇಕಲ್ಮಠದ ಸ್ವಾಮೀಜಿ ಅವರು ಮರದ ನೇಗಿಲು ನೀಡಿ ಸನ್ನಾನಿಸಿದರು.