ಕೃಷ್ಣಾ ನದಿ ರಕ್ಷಣೆ ನಮ್ಮೆಲ್ಲ ಹೊಣೆ

| Published : May 14 2025, 01:52 AM IST

ಕೃಷ್ಣಾ ನದಿ ರಕ್ಷಣೆ ನಮ್ಮೆಲ್ಲ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಕೃಷ್ಣಾ ನದಿಯ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಧಾರವಾಡ ವಾಲ್ಮಿಯ ಮಾಜಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಹೇಳಿದರು. ಆಲಮಟ್ಟಿಯ ಪ್ರವಾಸಿ ಮಂದಿರದ ಉದ್ಯಾನವನದಲ್ಲಿ ಕೃಷ್ಣಾ ಜಲ ಕುಟುಂಬದವರು ಆಯೋಜಿಸಿದ್ದ ಕೃಷ್ಣಾ ಜಲ ಸದ್ಭಾವನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗಿ ಆಂಧ್ರದ ಹಂಸಾದೇವಿಯಲ್ಲಿ ಬಂಗಾಳಕೊಲ್ಲಿ ಮೂಲಕ ಸಮುದ್ರ ಸೇರುತ್ತದೆ. ಈ ನಾಲ್ಕು ರಾಜ್ಯದ ಜನರು ಸೇರಿ ಕೃಷ್ಣಾ ನದಿಯನ್ನು ಸಂರಕ್ಷಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಕೃಷ್ಣಾ ನದಿಯ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಧಾರವಾಡ ವಾಲ್ಮಿಯ ಮಾಜಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಹೇಳಿದರು.

ಆಲಮಟ್ಟಿಯ ಪ್ರವಾಸಿ ಮಂದಿರದ ಉದ್ಯಾನವನದಲ್ಲಿ ಕೃಷ್ಣಾ ಜಲ ಕುಟುಂಬದವರು ಆಯೋಜಿಸಿದ್ದ ಕೃಷ್ಣಾ ಜಲ ಸದ್ಭಾವನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗಿ ಆಂಧ್ರದ ಹಂಸಾದೇವಿಯಲ್ಲಿ ಬಂಗಾಳಕೊಲ್ಲಿ ಮೂಲಕ ಸಮುದ್ರ ಸೇರುತ್ತದೆ. ಈ ನಾಲ್ಕು ರಾಜ್ಯದ ಜನರು ಸೇರಿ ಕೃಷ್ಣಾ ನದಿಯನ್ನು ಸಂರಕ್ಷಣೆ ಮಾಡಬೇಕು. ಕೃಷ್ಣಾ ನದಿಯು ದೇಶದ ಮೂರನೇಯ ದೊಡ್ಡ ನದಿಯಾಗಿದ್ದು, ಇಂದು ಕೃಷ್ಣೆಯ ಒಡಲಲ್ಲಿ ಸಕ್ಕರೆ ಕಾರ್ಖಾನಾಯಿಂದ ಹೊರಬರುವ ಮಾಲಿನ್ಯವನ್ನು ನದಿಗೆ ಬಿಡುವುದು, ನದಿಯಲ್ಲಿ ಮರುಳನ್ನು ತೆಗೆಯುವುದು, ನದಿಯ ಪಕ್ಕದಲ್ಲಿನ ಗಿಡಮರಗಳನ್ನು ನಾಶಮಾಡಿ ಕೃಷ್ಣಾ ನದಿಯನ್ನು ನಾವೆಲ್ಲರೂ ಹಾಳು ಮಾಡುತ್ತಿದೇವೆ. ಇದರಿಂದ ನದಿಯು ಮಹಾರಾಷ್ಟ್ರ- ಕರ್ನಾಟಕ ಭಾಗದಲ್ಲಿ ಮೈದುಂಬಿ ಹರಿದು ಮುಂದೆ ತೆಲಂಗಾಣ ಹಾಗೂ ಆಂಧ್ರದಲ್ಲಿ ಬತ್ತಿ ಹೋಗುತ್ತಿದೆ. ಹೀಗಾಗಿ, ಕೃಷ್ಣಾ ನದಿಯ ತೀರದಲ್ಲಿ ಇರುವ ರೈತರು ಹಾಗೂ ನೀರಾವರಿ ತಜ್ಞರು ಸೇರಿ ಕೃಷ್ಣಾ ನದಿಯ ಉಳಿಸುವ ನಿಟ್ಟಿನಲ್ಲಿ ಈ ಜಲಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆಂಧ್ರದ ನೀರಾವರಿ ತಜ್ಞ ಸತ್ಯನಾರಾಯಣ ಬೋಳಿಶೆಟ್ಟಿ ಮಾತನಾಡಿ, ಕೃಷ್ಣಾ ನದಿಯು ನಾಲ್ಕು ರಾಜ್ಯಗಳ ಜೀವ ನದಿ. ಲಕ್ಷಾಂತರ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಕೊಟ್ಟಿದ್ದಲ್ಲದೆ, ಕುಡಿಯುವ ನೀರಿನ ದಾಹವನ್ನು ತಣಿಸುವುದು ಕೃಷ್ಣಾ ನದಿ. ಇದನ್ನು ಉಳಿಸುವ ಜವಾಬ್ದಾರಿಯು ನಮ್ಮಲ್ಲರ ಮೇಲೆ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕೃಷ್ಣಾ ಕುಟುಂಬ ಎಂಬ ಸಂಘಟನೆಯನ್ನು ಪ್ರಾರಂಭಿಸಿದ್ದಾಗಿ ಅವರು ತಿಳಿಸಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಕೃಷ್ಣಾ ನದಿಗೆ ಅನೇಕ ಉಪ ನದಿಗಳು ಸೇರುತ್ತವೆ. ಉದಾರಣೆಗೆ ಭೀಮಾ, ಡೋಣಿ, ಮಲಪ್ರಭಾ, ಘಟಪ್ರಭದಂತಹ ಅನೇಕ ನದಿಗಳ ಬಂದು ಸೇರುತ್ತವೆ. ಆದರೆ, ಅನೇಕ ಕೃಷ್ಣೆಯ ಉಪನದಿಗಳು ಒತ್ತುವರಿಯಿಂದ ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ನಾಶದಿಂದ ನದಿಗಳಲ್ಲಿ ಹೂಳು ತುಂಬಿಕೊಂಡಿದೆ. ಇದನ್ನು ತಡೆಯಲು ನಾವೆಲ್ಲರೂ ಕೃಷ್ಣಾ ನದಿಯ ದಡದ ಜನರು ನದಿಯು ಮಾಲಿನ್ಯ ಆಗದ ಹಾಗೆ ನೋಡಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ವಿವರಿಸಿದರು.ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನೀರಾವರಿ ತಜ್ಞ ನರೇಂದ್ರ ಚುಗ, ಆಲಮಟ್ಟಿ ಅಣೆಕಟ್ಟಿನ ಮುಖ್ಯ ಅಭಿಯಂತರ ಡಿ.ಬಸವರಾಜ, ಭೀಮಾ ತೀರದ ಹೋರಾಟಗಾರ ಶಿವಕುಮಾರ ನಾಟಿಕಾರ ಮಾತನಾಡಿದರು ವೇದಿಕೆಯ ಮೇಲೆ ಅಪ್ಪಾಸಾಹೇಬ ಯರನಾಳ, ಸಂಜು ಬಿರಾದಾರ, ನಿಂಗಪ್ಪ ಅವಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೆಂಕಟೇಶ ಜಾಗೀರದಾರ ಸ್ವಾಗತಿಸಿ, ವಂದಿಸಿದರು.