ಸಾರಾಂಶ
ಗುಳೇದಗುಡ್ಡ : ಅಂಜಲಿ ಅಂಬಿಗೇರ ಕೊಲೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ನಿಜಗುಣ ಶರಣ ಅಂಬಿಗರ ಚೌಡಯ್ಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಾದಾಮಿ ನಾಕಾ ದಿಂದ ಪ್ರತಿಭಟನೆ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಅವರನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆಗೈದ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಯುವತಿಯ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಧನ ಒದಗಿಸಿ ಯುವತಿ ಕುಟುಂಬಕ್ಕೆ ನೆರವಾಗಬೇಕು. ಇಂತಹ ಹೀನ ಕೃತ್ಯಗಳು ಮುಂದೆ ಜರುಗದಂತೆ ಮತ್ತು ಇಂಥ ಅಮಾನುಷ ಕೃತ್ಯ ಎಸಗುವ ಕ್ರೂರ ಮನಸ್ಸಿನ ವ್ಯಕ್ತಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನ ಮೆರವಣಿಗೆಯಲ್ಲಿ ಸಂಗಮೇಶ ಕರಬಂದ, ಮುದಕಪ್ಪ ಕರಬಂಧ, ಮೂಕಪ್ಪ ಭೋವಿ, ಗ್ರಾಪಂ ಸದಸ್ಯ ಶಿವು ಚೊಳಚಗುಡ್ಡ, ಶಿವಪ್ಪ ಕರಬಂಧ, ಸಚಿನ್ ಅಂಬಿಗೇರ, ಈರಪ್ಪ ಅಂಬಿಗೇರ, ಯಮನಪ್ಪ ಮಡಿಕೇರಿ, ಯಲ್ಲಪ್ಪ ಅಂಬಿಗೇರ, ಈರಪ್ಪ ಕರಬಂಧ, ಅಶೋಕ್ ಕರಬಂಧ, ಎಲ್ಲಪ್ಪ ರಾಮದುರ್ಗ, ಸಕ್ರಪ್ಪ ಸಕ್ಕರಮಣಿ, ಶಂಕ್ರಪ್ಪ ಕರಬಂದ, ವಿಠ್ಠಲ ಕರಬಂಧ ಸೇರಿದಂತೆ ಇನ್ನೂ ಅನೇಕರು ಇದ್ದರು.