ಸಾರಾಂಶ
ಜಗಳೂರು: ತಾಲೂಕಿನ ಅಣಬೂರು ಮಾರುತಿ ಗ್ರಾಮಾಂತರ ಪ್ರೌಢಶಾಲೆಗೆ ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಂಘಟನೆಗಳ ಹೋರಾಟಗಾರರು ಪಟ್ಟಣದ ದಾವಣಗೆರೆ ರಸ್ತೆಯಲ್ಲಿನ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮನೋಹರ ರೆಡ್ಡಿ ನಿವಾಸ ಮುಂಬಾಗ ಗುರುವಾರ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಪೋಷಕ ವೆಂಕಟೇಶ್ ಮಾತನಾಡಿ, ಶಾಲೆಯಲ್ಲಿ ಕೆಲ ವರ್ಷದಿಂದ ಕಾಯಂ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರಿಂದಲೇ ಪಾಠ ನಡೆಯುತ್ತಿವೆ. ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು ಕೂಡಲೇ ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.ವಿದ್ಯಾರ್ಥಿನಿ ಸಿಂಚನ ಮಾತನಾಡಿ, ನಮಗೆ ಇಂಗ್ಲಿಷ್, ಕ್ರಾಫ್ಟ್ ಶಿಕ್ಷಣ, ದೈಹಿಕ ಶಿಕ್ಷಣ, ಹಿಂದಿ ಶಿಕ್ಷಕರು ಮಾತ್ರ ಇದ್ದಾರೆ. ವಿಜ್ಞಾನ ಶಿಕ್ಷಕರೇ ಗಣಿತ ಬೋಧಿಸುತ್ತಿದ್ದಾರೆ. ಕನ್ನಡ ವಿಷಯವನ್ನು ಬೋಧನೆ ಯಾರೊಬ್ಬರೂ ಮಾಡಿಲ್ಲ. ಶೈಕ್ಷಣಿಕ ಚಟುವಟಿಕೆಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಕಾಯಂ ಶಿಕ್ಷಕರ ನಿಯೋಜಿಸಬೇಕು ಎಂದು ಅಳಲು ತೋಡಿಕೊಂಡರು.
ಶಾಸಕ ಬಿ.ದೇವೇಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಪ್ರತಿಭಟನೆಯಿಂದ ನನಗೆ ಮುಖಭಂಗವಾಗಿದೆ. ಎರಡು ದಿನಗಳೊಳಗಾಗಿ ಸಮಸ್ಯೆ ಬಗೆಹರಿಸುವೆ ಎಂದು ಆಶ್ವಾಸನೆ ನೀಡಿದರು.ಬಿಇಒ ಹಾಲಮೂರ್ತಿ, ಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಹೇಶ್ವರಪ್ಪ, ಎಸ್ ಬಿಸಿ ಗೌರವಾಧ್ಯಕ್ಷ ಶರಣಪ್ಪ, ಖಜಾಂಚಿ ಗುಡ್ಡಪ್ಪ, ಚಂದ್ರಪ್ಪ, ರಂಗಸ್ವಾಮಿ, ಪೋಷಕರಾದ ಲಕ್ಷ್ಮಿ, ಬಂಗಾರಪ್ಪ, ನಿಂಗಪ್ಪ, ಬಾಲರಾಜ್, ನಾಗರಾಜ್, ಮುಖಂಡರಾದ ಮಹಾಲಿಂಗಪ್ಪ ಎಚ್ ಎಂ ಹೊಳೆ, ಇಂದಿರಾ ,ಪೂಜಾರ ಸಿದ್ದಪ್ಪ, ರಾಜಪ್ಪ, ಮತ್ತಿತರರು ಈ ಸಂದರ್ಭ ಇದ್ದರು.
- - --26ಜೆ.ಜಿ.ಎಲ್ ಆರ್.2, 3.ಜೆಪಿಜಿ: