ರಾಣಿಬೆನ್ನೂರು: ನಗರದಲ್ಲಿ ಆಟೋ ಎಲ್‌ಪಿಜಿ, ಸಿಎನ್‌ಜಿ ಸೇರಿದಂತೆ ಅಡಿಗೆ ಅನಿಲ ಸರಬರಾಜು ಮಾಡುವ ಬಂಕುಗಳ ಬಂಕುಗಳ ಮಾಲಿಕರು, ಏಜೆನ್ಸಿಯವರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರುತ್ತಿರುವುದುದನ್ನು ಖಂಡಿಸಿ ಆಟೋ ಚಾಲಕರು ಗುರುವಾರ ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕೃತಕವಾಗಿ ಗ್ಯಾಸ್ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಅಟೋ ಚಾಲಕರ ಅವಲಂಬಿತ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರರು ತಕ್ಷಣವೇ ಮಧ್ಯಪ್ರವೇಶಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡು ಬಡ ಆಟೋಚಾಲಕರ ರಕ್ಷಣೆಗೆ ನಿಲ್ಲಬೇಕು. ಈಗಾಗಲೆ ಗ್ರಾಮೀಣ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ಅಡುಗೆ ಸಿಲಿಂಡರ್ ಸರಬರಾಜಿನಲ್ಲಿ ಬಹಳಷ್ಟು ತೊಂದರೆಯಾಗಿದ್ದು ಮಧ್ಯವರ್ತಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ತಾವುಗಳು ತುರ್ತಾಗಿ ಈ ಸಮಸ್ಯೆಯನ್ನು ಹತೋಟಿಗೆ ತರದಿದ್ದರೆ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಅಟೋ ಚಾಲಕರು, ಸಾವಿರಕ್ಕೂ ಅಧಿಕ ಹೊಟೇಲ್ ಉದ್ದಿಮೆದಾರರು, ಅಡುಗೆ ಅನಿಲ ಬಳಸುವ ಕುಟುಂಬಸ್ತರು ಸಿಲಿಂಡರಿಗಾಗಿ ಪರದಾಡಬೇಕಾಗುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದರೆ ರಾಣಿಬೆನ್ನೂರು ನಗರದ ಬಂದ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.