ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲು ರೈತ ಸಂಘದಿಂದ ಆಗ್ರಹ
ಕನ್ನಡಪ್ರಭ ವಾರ್ತೆ ಬಂಗಾರಪೇಟೆತಾಲೂಕಿನ ಕಾಮಸಮುದ್ರ ರೈಲ್ವೆ ಗೇಟ್ ಬಳಿ ಮೇಲುಸೇತುವೆ ನಿರ್ಮಾಣ ಮಾಡಿ ವಾಹನ ಸವಾರರಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕು ಹಾಗೂ ಏರಿಕೆಯಾಗಿರುವ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ರೈಲ್ವೆ ಗೇಟ್ ಮುಂದೆ ಖಾಲಿ ಸಿಲಿಂಡರ್ಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.
ಕಾಮಸಮುದ್ರ ಹೋಬಳಿಯಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗಡಿಭಾಗದ ರೈತ ಕೂಲಿಕಾರ್ಮಿಕರು ಹಾಗೂ ಜನಸಾಮಾನ್ಯರ ದಶಕಗಳ ಬೇಡಿಕೆಯಾಗಿರುವ ಕಾಮಸಮುದ್ರ ರೈಲ್ವೆ ಗೇಟ್ ಬಳಿ ಮೇಲ್ಲೇತುವೆಯನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಭೂಮಿಯನ್ನು ರೈತರ ಮನವೊಲಿಸಿ ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ನೀಡಿ ಸೇತುವೆಗೆ ಅವಶ್ಯಕತೆ ಇರುವ 30 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು. ಪ್ರತಿ ದಿನ ಜನ ಸಾಮಾನ್ಯರು, ವಾಹನ ಸವಾರರು ಪಡುತ್ತಿರುವ ಸಮಸ್ಯೆಗೆ ಅಂತ್ಯ ಹಾಡಬೇಕೆಂದರು.ಮಳೆ ಬಂದರೆ ಮಳೆಯಲ್ಲಿ ನೆನೆಯಬೇಕಾಗುತ್ತದೆ. ಬೇಸಿಗೆ ಬಂದರೆ ಬಿಸಿಲಿನಲ್ಲಿ ಒಣಗಿ ಧೂಳಿನಿಂದ ಆರೋಗ್ಯವಾಗಿರುವ ವಾಹನ ಸವಾರರು ಆನಾರೋಗ್ಯ ಪೀಡಿತರಾಗುತ್ತಿದ್ದರೂ ಸಮಸ್ಯೆಯನ್ನು ಸ್ಥಳೀಯ ಸಂಸದರು ಹಾಗೂ ರೈಲ್ವೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರತಿದಿನ ಚೆನೈ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕಾಮಸಮುದ್ರ ರೈಲ್ವೆ ಗೇಟ್ನ್ನು ಪ್ರತಿ 20 ನಿಮಿಷಕ್ಕೆ ಮುಚ್ಚುವುದರಿಂದ ವಾಹನ ಸವಾರರಿಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಹಾಗೂ ವಿದ್ಯಾರ್ಥಿಗಳಿಗೆ, ರೈತರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆಗೆ ರೈಲ್ವೆ ಮಂತ್ರಿಗಳು ಶಾಶ್ವತ ಪರಿಹಾರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಯ ಜೊತೆಗೆ ರೈಲುಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದ ಸ್ವಚ್ಛತೆ ಹಾಗೂ ಗುಣಮಟ್ಟದ ಊಟವಿಲ್ಲದೆ ಪರದಾಡಬೇಕಾದ ಪರಿಸ್ಥಿತಿಯ ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆಯ ಬಗ್ಗೆ ಕರೆ ಮಾಡಲು ಇರುವ ಟೋಲ್ ಫ್ರೀ ನಂಬರ್ ಇದ್ದು, ಇಲ್ಲದಂತಾಗಿದೆ. ರೈಲುಗಳಲ್ಲಿ ದೂರದ ಪ್ರಯಾಣ ಮಾಡುವ ಪ್ರಯಾಣಿಕರು ಜೀವ ಭಯದಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದ್ದು, ಸಮಸ್ಯೆಯನ್ನು ಗಂಭೀರವಾಗಿ ಅಧಿಕಾರಿಗಳು ಪರಿಗಣಿಸಬೇಕೆಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಕದರಿನ ಅಪ್ಲೋಜಿರಾವ್ ಮಾತನಾಡಿ, ಕೊಲ್ಲಿ ದೇಶಗಳ ಯುದ್ಧದ ನೆಪದಲ್ಲಿ ಕಚ್ಚಾವಸ್ತುಗಳು ಸಿಗುತ್ತಿಲ್ಲವೆಂದು ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ದಿಢೀರನೆ 993 ಏರಿಕೆ ಮಾಡಿದ್ದು, ಹೋಟೆಲ್ ಉದ್ಯಮಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಆದರೆ ಬೆಲೆ ಏರಿಕೆ ಹೋಟೆಲ್ ಮಾಲೀಕರು ಗ್ರಾಹಕರ ಮೇಲೆ ಬೆಲೆ ಏರಿಕೆ ಮಾಡಿ ಕೇಳಿದರೆ, ಕೇಂದ್ರ ಸರ್ಕಾರದ ಮೇಲೆ ಬೆರಳು ತೋರಿಸುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿತ್ತು. ಕೂಡಲೇ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಕಾಮಸಮುದ್ರ ಹೋ. ಅಧ್ಯಕ್ಷ ಮುನಿಕೃಷ್ಣ, ವಿಶ್ವ, ಮುನಿರಾಜು, ಸಂತೋಷ, ಲಕ್ಷ್ಮಣ್,ನಾಗರಾಜ. ಮಂಜುನಾಥ, ಗೋವಿಂದಪ್ಪ, ಗುಲ್ಲಟ್ಟಿ ತಿಮ್ಮಣ್ಣ, ಪುತ್ತೇರಿರಾಜು, ಗಿರೀಶ್, ಚಂದ್ರಪ್ಪ, ಬಾಬಾಜಾನ್, ಚಾಂದ್ ಪಾಷ, ಕಿರಣ್, ಶೈಲಜ ರತ್ನಮ ಪವಿತ್ರ ವೆಂಕಟಮ್ಮ ಇದ್ದರು.