ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

| Published : Jan 14 2024, 01:33 AM IST

ಸಾರಾಂಶ

ಮಿನಿ ವಿಧಾನಸೌಧ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಕಚೇರಿಯ ಮುಖ್ಯದ್ವಾರ ಬಂದ್ ಮಾಡಿ ಧರಣಿ ನಡೆಸಿದರು. ಬೇಕೇ, ಬೇಕೂ ನ್ಯಾಯ ಬೇಕು. ಭ್ರಷ್ಟ ಅಧಿಕಾರಿ, ಸಿಬ್ಬಂದಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಪಟ್ಟಣದ ಮಿನಿ ವಿಧಾನಸೌಧ ಹಾಗೂ ತಹಸೀಲ್ದಾರ್‌ ಕಚೇರಿಯಲ್ಲಿ ಮೀತಿ ಮೀರಿರುವ ಭ್ರಷ್ಟಾಚಾರ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು, ಸಾರ್ವಜನಿಕರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮಿನಿ ವಿಧಾನಸೌಧ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಕಚೇರಿಯ ಮುಖ್ಯದ್ವಾರ ಬಂದ್ ಮಾಡಿ ಧರಣಿ ನಡೆಸಿದರು. ಬೇಕೇ, ಬೇಕೂ ನ್ಯಾಯ ಬೇಕು. ಭ್ರಷ್ಟ ಅಧಿಕಾರಿ, ಸಿಬ್ಬಂದಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ರೈತ ಮುಖಂಡರಾದ ಎಫ್.ಎಸ್.ಸಿದ್ಧನಗೌಡರ, ಮಹಾಂತೇಶ ಕಮತ ಮಾತನಾಡಿ, ಉಪನೋಂದಣಿ, ಭೂಮಾಪನ, ಖಜಾನೆ, ಶಿಶು ಅಭಿವೃದ್ಧಿ, ಕಾರ್ಮಿಕ ಇಲಾಖೆ ಸೇರಿದಂತೆ ಇನ್ನೂಳಿದ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡ ಆಡುತ್ತಿದೆ. ತಹಸೀಲ್ದಾರ್‌ ಕಚೇರಿಯಲ್ಲೂ ಮೀತಿ ಮೀರಿದೆ. ಎಲ್ಲ ಕಡೆ ಏಜೆಂಟರ್ ಹಾವಳಿ ಹೆಚ್ಚಿದೆ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಕೆಳ ಹಂತದ ಅಧಿಕಾರಿಗಳು ಕಚೇರಿಗೆ ಬರುವ ಜನಸಾಮಾನ್ಯರ ಮೇಲೆ ದರ್ಪ ತೋರಿ ಪ್ರತಿಯೊಂದು ಕೆಲಸಕ್ಕೆ ಲಂಚ ಪಡೆಯುತ್ತಿದ್ದಾರೆ. ಲಂಚ ಕೊಟ್ಟವರ ಕೆಲಸ ಮಾತ್ರ ಮಾಡಿಕೊಡುತ್ತಿದ್ದು, ಲಂಚ ಕೊಡದವರ ಕೆಲಸ ಮಾಡದೆ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ಭೂಮಿ ಅಳತಗೆ ಬರುವ ಸಿಟಿ ಸರ್ವೆಯರಗಳು ರೈತರಿಂದ ಸಾವಿರಾರು ರುಪಾಯಿ ಲಂಚ ಪಡೆಯುತ್ತಿದ್ದಾರೆ. ಮೇಲಾಧಿಕಾರಿಗಳು ಈ ಕೂಡಲೇ ಭ್ರಷ್ಟಾಚಾರ ನಿಯಂತ್ರಣಕ್ಕೆ, ಸರ್ಕಾರಿ ಕಚೇರಿಗಳಲ್ಲಿನ ಅನಧಿಕೃತ ಏಜೆಂಟರ್‌ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕದೆ ಹೋದರೆ ರೈತರಿಂದ ಬಾರಕೋಲು ಚಳುವಳಿ ನಡೆಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಹಸೀಲ್ದಾರ್‌ ಸಚ್ಚಿದಾನಂದ ಕೊಚನೂರ ಪ್ರತಿಭಟನಾನಿರತರ ಸಮಸ್ಯೆ ಆಲಿಸಿದರು. ಯಾವುದೇ ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ, ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಸಿ.ಕೆ.ಮೆಕ್ಕೇದ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಮುರುಗೇಶ ಗುಂಡ್ಲೂರ, ವಿಜಯ ಪತ್ತಾರ, ಸುರೇಶ ವಾಲಿ, ಸುರೇಶ ಹೊಳಿ, ಉದಯ ದುಗ್ಗಾಣಿ, ಮಲ್ಲಿಕಾರ್ಜುನ ಹುಂಬಿ, ವಿಠ್ಠಲ ಒಕ್ಕುಂದ, ನಾಗಪ್ಪ ಗುಂಡ್ಲೂರ, ಗೂಳಪ್ಪ ಹೊಳಿ, ಮಡಿವಾಳಪ್ಪ ಗುಳ್ಳಿ ಇದ್ದರು.