ಬಿಜೆಪಿ ಸಂವಿಧಾನಿಕ ಮೌಲ್ಯಗಳಿಗೆ ಅವಮಾನ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಉತ್ತರಾಖಂಡ ಪೋಲೀಸರು ಆಘಾತಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ

ಹೊಸಪೇಟೆ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡ ಕೊತ್ವಾಲಿ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿರುವ ಬಿಜೆಪಿ ಕ್ರಮ ಖಂಡಿಸಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆ ಉದ್ದೇಶಿಸಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ ಮಾತನಾಡಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲು ಉತ್ತರಾಖಂಡ ಪೊಲೀಸರನ್ನು ಬಳಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ನಿಂತು ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡಿರುವುದು, ದೇಶದಲ್ಲಿರುವ ಎಲ್ಲ ದಲಿತರಿಗೆ ಮಾಡಿರುವ ಅವಮಾನ ಮತ್ತು ಅನ್ಯಾಯದ ವಿಷಯವಾಗಿದೆ, ಶುದ್ಧೀಕರಣ ಮಾಡಿರುವವರು ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಖಂಡನೀಯ ಎಂದರು.

ಕಾಂಗ್ರೆಸ್ ಮುಖಂಡೆ ರಶ್ಮಿ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಬಿಜೆಪಿ ಸಂವಿಧಾನಿಕ ಮೌಲ್ಯಗಳಿಗೆ ಅವಮಾನ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಉತ್ತರಾಖಂಡ ಪೋಲೀಸರು ಆಘಾತಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲು ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಮಾಡುವ ರೀತಿಯಲ್ಲಿದೆ. ವಿರೋಧ ಪಕ್ಷದ ನಾಯಕರ ವಿರುದ್ಧವೇ ದಬ್ಬಾಳಿಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಿಯಮ ಬಾಹಿರವಾಗಿ ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ಕುರಿ ಶಿವಮೂರ್ತಿ,ರವಿಕುಮಾರ್‌, ಕೆ. ರಮೇಶ್, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್‌, ಅನಂತ್ ಪದ್ಮನಾಭ, ತಮ್ಮನ್ನೆಳ್ಳಪ್ಪ, ಬಿ.ಮಾರೆಣ್ಣ, ಎಚ್. ಸೋಮಶೇಖರ, ಜಿಲ್ಲಾ ಕಾರ್ಯದರ್ಶಿ ಕೊಟಗಿನಾಳ್ ಮಲ್ಲಿಕಾರ್ಜುನ, ಲಿಂಗಣ್ಣ ನಾಯಕ, ವೆಂಕಟೇಶ್, ಟಿ.ವೀರಾಂಜನೇಯ, ವಿಜಯಕುಮಾರ್, ಶೇಖ್ ತಾಜುದ್ದೀನ್, ಕೆ.ಇಮ್ತಿಯಾಜ್, ಸಿ.ಆರ್. ಭರತ ಕುಮಾರ್, ಏಕಾಂಬರೇಶ ನಾಯ್ಕ, ಡಿ.ಲಾಲ್ಯಾನಾಯ್ಕ್, ವೀರಭದ್ರ ನಾಯಕ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.