ಸಾರಾಂಶ
ಕುಷ್ಟಗಿ: ಪರಿಶಿಷ್ಟ ಪಂಗಡಕ್ಕೆ ಪ್ರಬಲ ಸಮಾಜಗಳನ್ನು ಅವೈಜ್ಞಾನಿಕವಾಗಿ ಸೇರ್ಪಡೆ ಮಾಡುತ್ತಿರುವ ಕಾರ್ಯ ವಿರೋಧಿಸಿ ಕುಷ್ಟಗಿ ತಾಲೂಕು ವಾಲ್ಮೀಕಿ ನಾಯಕ ಸಮಾಜದವರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಾನಪ್ಪ ತಳವಾರ ಮಾತನಾಡಿ, ಇತ್ತೀಚಿಗೆ ಸರ್ಕಾರ ಪರಿಶಿಷ್ಟ ಪಂಗಡದ ಪ್ರಬಲ ಜಾತಿಗಳನ್ನು ಸೇರಿಸುವ ಕುರಿತು ಸಿದ್ಧತಾ ಸಭೆ ಪ್ರಾರಂಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುವಾಗ ಪಕ್ಷಪಾತವಿಲ್ಲದೇ, ನ್ಯಾಯ ಒದಗಿಸುತ್ತೇನೆ ಎಂದು ಹೇಳಿದ್ದರು ಆದರೆ ಮುಖ್ಯಮಂತ್ರಿ ಪ್ರತಿಜ್ಞಾವಿಧಿ ಉಲ್ಲಂಘಿಸಿ 45 ಲಕ್ಷ ಜನಸಂಖ್ಯೆ ಇರುವ ಪ್ರಬಲ ಮತ್ತು ಸ್ವ-ಜಾತಿಯನ್ನು ಅವೈಜ್ಞಾನಿಕವಾಗಿ ಸೇರ್ಪಡೆ ಮಾಡಲು ಮುಂದಾಗಿದ್ದು ಖಂಡನೀಯ ಎಂದರು.ಇತ್ತೀಚಿಗೆ ಪರಿಶಿಷ್ಟ ಜಾತಿಗೆ ಒಳಮೀಸಲು ವಿಷಯದಲ್ಲಿ ಕೂಡಾ ನ್ಯಾಯಮೂರ್ತಿ ನಾಗಮೋಹನದಾಸ ವಸ್ತುಸ್ಥಿತಿ ವರದಿ ತಿರಸ್ಕೃರಿಸಿ ತನ್ನ ರಾಜಕೀಯ ಅನುಕೂಲಕ್ಕಾಗಿ ಒಪ್ಪಂದ ಸೂತ್ರದ ಮೂಲಕ ಅವೈಜ್ಞಾನಿಕವಾಗಿ ಮೀಸಲಾತಿ ಹಂಚಿ ಅಲೆಮಾರಿ ಸಮಾಜಕ್ಕೆ ಬಾರಿ ಅನ್ಯಾಯ ಎಸಗಿದ್ದಾರೆ. ಎಸ್.ಸಿ.ಪಿ, ಟಿ.ಎಸ್.ಪಿ.ಅನುದಾನ ಮಾಧ್ಯಮದಲ್ಲಿ ಘೋಷಣೆ ಮಾಡುತ್ತಾರೆ. ವಿವಿಧ ಇಲಾಖೆಗಳಲ್ಲಿ ಪಜಾ, ಪ.ಪಂದ ಜನರಿಗೆ ಸೌಲಭ್ಯ ಸಿಗದೆ ವಂಚಿತರಾಗುತ್ತಿದ್ದಾರೆ. ವ್ಯವಸ್ಥಿತವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೋಸ ಮಾಡಿದ್ದಾರೆ ಎಂದರು.
ಸಮಾಜದ ಮುಖಂಡ ಬಾಲಪ್ಪ ಚಾಕ್ರಿ, ಚಂದ್ರಹಾಸ ಬಾವಿಕಟ್ಟಿ ಮಾತನಾಡಿದರು, ಈ ಸಂದರ್ಭದಲ್ಲಿ ಮರಿಯಪ್ಪ ತುಮರಿಕೊಪ್ಪ, ರಮೇಶ ಕೊಳ್ಳಿ, ಬಸವರಾಜ ನಾಯಕ, ಮಾಲತಿ ನಾಯಕ, ರಮೇಶ ಕೊನಸಾಗರ, ರವಿಪ್ರಕಾಶ ಕೆಳಗಡೆ, ದೊಡ್ಡಪ್ಪ ನಾಯಕ, ಜಗ್ಗನಗೌಡ ಪಾಟೀಲ, ರಮೇಶ ನಿಲೋಗಲ್, ಶಾಂತಪ್ಪ ದಿವಟರ್,ಸಂತೋಷ ಗುಜ್ಜಲ, ಈರಪ್ಪ ನಾಯಕ, ಮಲ್ಲಯ್ಯ ಲೈನದ್, ಬಸವರಾಜ ಕನ್ನಾಳ, ಪುಂಡಲಿಕಪ್ಪ ಬುಡಕುಂಟಿ, ಲಕ್ಮವ್ವ ರಗಣಿ ಸೇರಿದಂತೆ ಅನೇಕರು ಇದ್ದರು.ಇದಕ್ಕೂ ಮೊದಲು ವಾಲ್ಮೀಕಿ ಮಂದಿರದಿಂದ ಮಾರುತಿ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ತಹಸೀಲ್ದಾರ ಕಾರ್ಯಾಲಯದವರೆಗೆ ಮೆರವಣಿಗೆ ನಡೆಸಿದರು.