ಸಾರಾಂಶ
ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುವುದರ ಮೂಲಕ ಮಹಾರಾಷ್ಟ್ರದ ರಾಮಗಿರಿಯ ಗಂಗಾಗಿರಿ ಸ್ವಾಮೀಜಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿರುವುದಲ್ಲದೆ ಇಸ್ಲಾಂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹಾಗೆ ನಡೆದುಕೊಂಡಿದ್ದಾರೆ ಇವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗಂಗಾ ಗಿರಿ ಮಹಾರಾಜ್ ವಿರುದ್ಧ ಬಾಣಾವರದ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಇಸ್ಲಾಂ ಧರ್ಮದ ಪ್ರವರ್ತಕರು ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಮಹಾರಾಷ್ಟ್ರದ ರಾಮಗಿರಿಯ ಗಂಗಾ ಗಿರಿ ಮಹಾರಾಜ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬಾಣಾವರದ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.ಬಾಣಾವರ ಪೇಟೆ ಸುನ್ನಿ ಜಾಮಿಯಾ ಮಸೀದಿಯಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಕನಕ ವೃತ್ತದಲ್ಲಿ ಜಮಾವಣೆಗೊಂಡು ರಾಮಗಿರಿಯ ಸ್ವಾಮೀಜಿಯ ವಿರುದ್ಧ ಧಿಕ್ಕಾರವನ್ನು ಕೂಗಿ ಸ್ವಾಮೀಜಿಯನ್ನು ಬಂಧಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷ ಸೈಯದ್ ರಹಿಂ ಸಾಬ್, ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುವುದರ ಮೂಲಕ ಮಹಾರಾಷ್ಟ್ರದ ರಾಮಗಿರಿಯ ಗಂಗಾಗಿರಿ ಸ್ವಾಮೀಜಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿರುವುದಲ್ಲದೆ ಇಸ್ಲಾಂ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹಾಗೆ ನಡೆದುಕೊಂಡಿದ್ದಾರೆ ಇವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ಮಾತನಾಡಿದ ಧರ್ಮ ಗುರುಗಳಾದ ಸರಪರಾಜ್ ರಜಾರ್, ಇಸ್ಲಾಂ ಧರ್ಮದ ಪ್ರವರ್ತಕರು ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನ ನೀಡಿರುವ ಸ್ವಾಮೀಜಿಯಿಂದಾಗಿ ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ವೈಷಮ್ಯ ಉಂಟಾಗುವುದಲ್ಲದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಬೇಕಾದ ಸ್ವಾಮೀಜಿ ಈ ರೀತಿಯ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದರಿಂದ ಸಮಾಜದಲ್ಲಿ ಶಾಂತಿಯುತ ಜೀವನ ನಡೆಸಲು ಅಸಾಧ್ಯವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಮಹಾರಾಷ್ಟ್ರ ಸರ್ಕಾರ ಈ ಸ್ವಾಮೀಜಿಯನ್ನು ಬಂಧನದಲ್ಲಿಟ್ಟು ಇವರ ಮೇಲೆ ನ್ಯಾಯಾಂಗ ತನಿಖೆಯನ್ನು ನಡೆಸಬೇಕೆಂದರು.ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಲಿಂಗರಾಜುರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಕಾರ್ಯದರ್ಶಿ ಸರ್ಫಾನ್ ಖಜಾಂಚಿ ಶಬ್ಬೀರ್ ಹಾಗೂ ಸದಸ್ಯರುಗಳಾದ ದಾದಾಪೀರ್ ಸಾಬ್ ಜಾನ್ ಸಾಬ್, ಮನ್ಸೂರ್ , ಕೆ ಸಿ ಖಾದರ್ ಭಾಷಾ ಸಾಬ್, ಶಫಿ ಅಹಮದ್ ಸಾಬ್, ಮೊಹಮ್ಮದ್ ಇಲಿಯಾಜ್ ಸಾಬ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಸೈಯದ್ ಆಸಿಫ್, ಕಾಂಗ್ರೆಸ್ ಮುಖಂಡರಾದ ಇಮ್ರಾನ್ ಸಮಾಜದ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮದ್. ಡಾ. ಕಾಸಿಂ ಫಿರಾನ್ ಸಾಬ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.