ಬ್ಯಾಡಗಿ: ಪಟ್ಟಣದ ನೆಹರು ನಗರದಲ್ಲಿರುವ ಉಪ ಅಂಚೆ ಕಚೇರಿಯನ್ನು ವಿಲೀನಗೊಳಿಸಲು ಮುಂದಾಗಿರುವ ಅಂಚೆ ಇಲಾಖೆ ಯ ಕ್ರಮ ಖಂಡಿಸಿ ನೆಹರು ನಗರದ ಗ್ರಾಹಕರು ಅಂಚೆ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.

ಗುರುವಾರ ಬೆಳಗ್ಗೆಯಿಂದ ಅಂಚೆ ಕಚೇರಿ ಎದುರು ಜಮಾಯಿಸಿದ ನಿವಾಸಿಗಳು ವಿಲೀನ ಮಾಡದಂತೆ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ನಿವಾಸಿ ಸುಧೀರ್ ಹವಳದ "ನೆಹರು ನಗರದಲ್ಲಿ ಕಳೆದ 40 ವರ್ಷಗಳಿಂದ ಉಪ ಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸಾವಿರಾರು ಜನರಿಗೆ ಎಲ್ಲ ಸೌಲಭ್ಯಗಳು ಲಭ್ಯವಾಗಿದೆ, ಆದರೆ ಇದೀಗ ಯಾವುದೇ ಪೂರ್ವ ಸೂಚನೆ ಇಲ್ಲದೆ ಕಚೇರಿ ವಿಲೀನಗೊಳಿಸಲು ಮುಂದಾಗಿರುವುದು ಖಂಡನೀಯ ಎಂದರು. ಮಹೇಶ್ವರಿ ಪಸಾರದ ಮಾತನಾಡಿ, ಸದರಿ ಕಚೇರಿ ಕೇವಲ ಅಂಚೆ ಸೇವೆಗಳಷ್ಟೇ ಅಲ್ಲ, ಬ್ಯಾಂಕಿಂಗ್ ಸೇವೆಗಳು, ಹಣ ವರ್ಗಾವಣೆ, ಪಿಂಚಣಿ ವಿತರಣೆ ಸೇರಿದಂತೆ ಅನೇಕ ಪ್ರಮುಖ ಸೇವೆಗಳನ್ನು ನೀಡುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಈ ಕಚೇರಿಯ ಮೇಲೆ ಅವಲಂಬಿತರಾಗಿದ್ದಾರೆ. ಕಚೇರಿ ವಿಲೀನಗೊಂಡರೆ, ಅವರಿಗೆ ದೂರದ ಮುಖ್ಯ ಕಚೇರಿಗೆ ಹೋಗುವುದು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ಪರಪ್ಪ ಯಕಲಾಸಪುರ, ಅನುರಾಧಾ ಮೋರಿಗೇರಿ, ರಾಮಣ್ಣ ಉಕ್ಕುಂದ, ಸಂತೋಷ ಮೂಲಿಮನಿ ಮಹಾಂತೇಶ ಮಾತನವರ, ವಿಜಯ ಬಡಿಗೇರ, ಪಾಂಡುರಂಗ ಸುತಾರ, ಮುತ್ತಣ್ಣ ಸಂಕಣ್ಣನವರ, ಚಂದ್ರಶೇಖರ ಬಣಕಾರ, ಮಲಕಪ್ಪ ಎಲಿ, ಸುಜಾತಾ ಶಿಗ್ಗಾವಿ, ಗಿರಿಜಾ ಹಾಲನಗೌಡ್ರ, ದ್ರಾಕ್ಷಾಯಣಿ ಹೊಂಬರಡಿ, ಶಿಲ್ಪಾ ಮಾತನವರ, ಸುನಿತಾ ಸಂಕಣ್ಣನವರ, ಸೇರಿದಂತೆ ಹಲವರು ಭಾಗವಹಿಸಿದ್ದರು.ನೆಹರು ನಗರವು ವಿಸ್ತಾರವಾದ ಪ್ರದೇಶವಾಗಿದ್ದು ಇಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇಂತಹ ಪ್ರದೇಶದಲ್ಲಿನ ಉಪ ಅಂಚೆ ಕಚೇರಿ ಮುಚ್ಚುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗಲಿದೆ, ದಿನ ನಿತ್ಯದ ಅಂಚೆ ವ್ಯವಹಾರಗಳು, ಹಣ ವರ್ಗಾವಣೆ, ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಜನರು ದೂರ ಪ್ರಯಾಣಿಸಬೇಕಾಗುತ್ತದೆ’ ಆದ್ದರಿಂದ ಇಲಾಖೆ ತಮ್ಮ ನಿರ್ಧಾರ ಮತ್ತೊಮ್ಮೆ ಪರಿಶೀಲಿಸಲಿ ಎಂದು ಅನುರಾಧಾ ಮೋರಿಗೇರಿ ಹೇಳಿದರು.