ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದೂಗಳ ಮೇಲೆ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.ರಾಮನಗರದ ಐಜೂರು ಸರ್ಕಲ್ನಲ್ಲಿ ಸೇರಿದ ಪ್ರತಿಭಟನಾಕಾರರು ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ಘೋ಼ಷಣೆ ಕೂಗುತ್ತಾ ಕಿಡಿಕಾರಿದರು. ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮುಖಂಡ ಗೌತಮ್ಗೌಡ ಮಾತನಾಡಿ, ಪಹಲ್ಗಾಮ್ನಲ್ಲಿ ಹಿಂದೂಗಳ ಮೇಲೆ ಮಂಗಳವಾರ ನಡೆದ ಕೃತ್ಯ ಖಂಡನೀಯ. ಇದು ಭಯೋತ್ಪಾದಕರ ಹೇಡಿ ಕೃತ್ಯ, ಇದನ್ನು ಎಲ್ಲಾ ಹಿಂದೂಗಳು ಖಂಡಿಸುತ್ತೇವೆ. ನಮ್ಮ ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆಚಾರ ವಿಚಾರ ಸಂಸ್ಕೃತಿ ಇರುವಂತಹ ದೇಶದಲ್ಲಿ ಭಯೋತ್ಪಾದಕರ ಕೃತ್ಯ ಖಂಡನೀಯ ಎಂದರು.ಇಂತಹ ಘೋರ ಕೃತ್ಯ ನಡೆಸುವ ಮೂಲಕ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಇಂತಹವರನ್ನು ಬಂಧಿಸಿ ಜೈಲಿಗಟ್ಟಿದರೆ ಯಾವ ಪ್ರಯೋಜನ ಇಲ್ಲ ಇವರನ್ನು ಹುಡುಕಿ ಹುಡುಕಿ ನೇರವಾಗಿ ಸಾಯಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ಭಯೋತ್ಪಾದನೆಯ ವಿಚಾರದಲ್ಲಿ ರಾಜಕೀಯ ಬೇಡ. ಕಳೆದ ೧೧ ವರ್ಷಗಳಿಂದ ಯಾವ ಘಟನೆಗಳೂ ಆಗಿರಲಿಲ್ಲ, ಮುಂದಾದರೂ ಜಾತಿ ಬಿಟ್ಟು ನಾವೆಲ್ಲಾ ಹಿಂದೂ ಎಂದು ಒಗ್ಗಟ್ಟಾಗಬೇಕು ಎಂದರು.ಬಿಜೆಪಿ ಮುಖಂಡ ಪ್ರಸಾದ್ಗೌಡ ಮಾತನಾಡಿ, ಉಗ್ರರು ನಡೆಸಿದ ಕೃತ್ಯಕ್ಕೆ ಪ್ರತಿಕಾರ ಆಗಬೇಕು. ಇಲ್ಲದಿದ್ದರೆ ಮುಂದೆ ಹಿಂದೂ ಧರ್ಮದವರು ಬಾಳಲು ಸಾಧ್ಯವಿಲ್ಲ. ಎಲ್ಲರೂ ಜಾತಿ, ಪಂಗಡ, ಮೀಸಲಾತಿ, ಒಳ ಮೀಸಲಾತಿ ಬಿಟ್ಟು ನಾವೆಲ್ಲಾ ಒಗ್ಗಟ್ಟಾಗಬೇಕು. ಜಾತಿ ಜಾತಿಗೆ ಇರುವ ಸ್ವಾಮೀಜಿಗಳು ಹಿಂದೂ ಧರ್ಮ ರಕ್ಷಣೆಗೆ ಮುಂದಾಗಬೇಕು. ಎಸಿ ಕಾರು, ಎಸಿ ರೂಮು ಬಿಟ್ಟು ಆಚೆ ಬಂದು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಹಿಂದೂ ಮುಖಂಡ ಅನಿಲ್ ಮಾತನಾಡಿದರು.ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಎಸ್. ಜಗದೀಶ್, ಹಿಂದೂ ಹಿತರಕ್ಷಣಾ ಸಮಿತಿ ನಂದೀಶ್, ಹಿಂದೂ ಪರಿವಾರ ಕಾರ್ಯಕರ್ತರಾದ ಸುಹಾಸ್, ಜ್ಞಾನೇಶ್, ಮೋಹಿತ್ ಬಿಜೆಪಿ ಮುಖಂಡರಾದ ರುದ್ರದೇವರು, ಶಿವಾನಂದ್, ಕಿಶನ್, ರಾಘವೇಂದ್ರ ಜಗನ್ನಾಥ್ ಮುಂತಾದವರು ಇದ್ದರು.