ಸಾರಾಂಶ
ರಾಣಿಬೆನ್ನೂರು: ರಾಜ್ಯ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ನಗರದಲ್ಲಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸಲು ಹುನ್ನಾರ ನಡೆಸಿದೆ. ನಮ್ಮ ಆಸ್ತಿ, ನಮ್ಮ ಹಕ್ಕಾಗಿದ್ದು ಇದರ ಮೇಲೆ ಯಾರೇ ಕಣ್ಣು ಹಾಕಿದರೂ ಸುಮ್ಮನೇ ಕುಳಿತುಕೊಳ್ಳದೆ ಅದನ್ನು ಸಮರ್ಥವಾಗಿ ಎದುರಿಸಿ ತಕ್ಕ ಪಾಠ ಕಲಿಸುವ ಸಾಮರ್ಥ್ಯ ನಮ್ಮ ರೈತರಿಗೆ ಹಾಗೂ ಹಿಂದು ಸಮಾಜಕ್ಕಿದೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನದಾಸೋಹದೊಂದಿಗೆ ವಿದ್ಯಾದಾನ ಮಾಡುತ್ತಿರುವ ಮಠ, ಮಂದಿರಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಅಸಂವಿಧಾನಿಕವಾದ ಸರ್ವಾಧಿಕಾರಿ ಧೋರಣೆಯನ್ನು ತೆಗೆದುಕೊಂಡ ಸರ್ಕಾರ ಕೂಡಲೇ ಅತಿಕ್ರಮಿಸಿದ ಆಸ್ತಿಯನ್ನು ಮರಳಿ ರೈತರಿಗೆ ಮತ್ತು ಮಠ ಮಂದಿರಗಳಿಗೆ ನೀಡಬೇಕು. ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡಿ ರೈತರಿಗೆ ನೀಡಿರುವ ನೋಟಿಸನ್ನು ವಾಪಸ್ಸು ಪಡೆದು ಅದನ್ನು ಮೊದಲಿನಂತೆ ಅವರ ಹೆಸರಿಗೆ ಬದಲಾಯಿಸಬೇಕು. ಹಿಂದು ಸಮಾಜವನ್ನು ಮತ್ತು ರೈತರನ್ನು ಲಘವಾಗಿ ಕಂಡ ಮಂತ್ರಿ ಜಮೀರ್ ಅಹ್ಮದ್ ಅವರನ್ನು ಕೂಡಲೇ ಮಂತ್ರಿ ಮಂಡಲದಿಂದ ವಜಾ ಮಾಡಿ ಅವರ ಮೇಲೆ ಸರ್ಕಾರ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಬಸವರಾಜ ಪಾಟೀಲ, ರುದ್ರೇಶ ಬುಕ್ಕಶೆಟ್ಟಿ, ನಾಗರಾಜ ಕೊರವರ, ವಿನಯಗೌಡ ಬಾಳನಗೌಡ್ರ, ಚನ್ನಬಸಪ್ಪ ಓಂಕಾರಣ್ಣನವರ, ಅನಿಲ ಮಳವಳ್ಳಿ, ದೀಪಕ ಹರಪನಹಳ್ಳಿ, ಹೇಮಂತ ಬೂದನೂರ, ದತ್ತಾತ್ರೇಯ ರೇವಣಕರ, ಶ್ರೀನಿವಾಸ್ ಜಿ.ಎನ್., ರಾಯಣ್ಣ ಮಾಕನೂರ. ಅಮೋಘ ಬದಾಮಿ, ಅಜಯ್ ಮಠದ, ಭೀಮರಾಜ ಕುಂಕುಮಗಾರ, ಬೀರೇಶ ಮೆಡ್ಲೇರಿ, ಬೀರೇಶ ಗುದಿಗೇರ ಮತ್ತಿತರರಿದ್ದರು.ಇದಕ್ಕೂ ಪೂರ್ವದಲ್ಲಿ ತಹಸೀಲ್ದಾರ್ ಕಚೇರಿ ಬಳಿ ಹಳೇ ಪಿ.ಬಿ. ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.