ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಸಂವಿಧಾನ ಬದಲಾವಣೆ ದುರುದ್ದೇಶವನ್ನು ಹೊಂದಿರುವ ಕೇಂದ್ರದ ಎನ್ಡಿಎ ಸರ್ಕಾರದಿಂದ ಸಂವಿಧಾನವನ್ನು ರಕ್ಷಣೆ ಮಾಡಬೇಕಾದದ್ದು ಎಲ್ಲರ ಹೊಣೆಯಾಗಿದೆ ಎಂದರು.ಸಂವಿಧಾನದ ಬಲದಿಂದಲೇ ಗೃಹ ಇಲಾಖೆಯ ಮುಖ್ಯಸ್ಥರಾಗಿದ್ದುಕೊಂಡು ಸಂವಿಧಾನ ಶಿಲ್ಪಿಯನ್ನೇ ಹೀಯಾಳಿಸಿರುವುದು ಘೋರ ಅಪಮಾನ. ಸಂವಿಧಾನದ ಕುರಿತು ಸಚಿವರಿಗೆ ಇರುವ ಅಸಡ್ಡೆಯನ್ನು ಇದು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಂವಿಧಾನವನ್ನು ಬದಲಾಯಿಸುವ, ತಿದ್ದುಪಡಿಗಳ ಮೂಲಕ ಮೂಲ ಆಶಯಗಳನ್ನು ತಿರುಚುವ, ವಿಶೇಷವಾಗಿ ಕೃಷಿಕರು, ಮಹಿಳೆಯರು, ದಲಿತರು, ಹಿಂದುಳಿದವರು ಸೇರಿದಂತೆ ಅಸಹಾಯಕ ಸಮುದಾಯಗಳನ್ನು ಉದಾಸೀನವಾಗಿ ಕಾಣುತ್ತಾ ಅವರನ್ನು ಶೋಷಿಸುತ್ತಲೇ ಬಂದಿದೆ ಎಂದು ದೂರಿದರು.ಬಹುಜನರ ರಕ್ಷಾಕವಚ ಸಂವಿಧಾನ ಕುರಿತು ಅಸಹನೆ ಹೊಂದಿರುವ ಕೆಲವು ಮನುಸ್ಮೃತಿ ಪ್ರಭಾವಿತ ಬಿಜೆಪಿಗರು ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಹಗುರವಾಗಿ ಕೆಲವೊಮ್ಮೆ ಆಕ್ರೋಶ ಭರಿತವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಈಗ ಅದೇ ಪರಂಪರೆಯನ್ನು ಕೇಂದ್ರ ಗೃಹ ಸಚಿವರು ಮುಂದುವರಿಸಿದ್ದಾರೆ. ಈ ಬಗ್ಗೆ ಪ್ರಧಾನಿಗಳ ಮೌನ- ಹೇಳಿಕೆಯನ್ನು ಸಮ್ಮತಿಸಿರುವುದು ರಾಷ್ಟ್ರೀಯ ದುರಂತವೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ್ಯ ಭಾರತ ನಿರ್ಮಾಣದಲ್ಲಿ ಮಹಾತ್ಮ ಗಾಂಧಿ ಅವರ ಅಹಿಂಸಾ ಸಂಗ್ರಾಮ ಮುಖ್ಯ ಪಾತ್ರ ವಹಿಸಿದಂತೆ ಮಾನವತೆ ಮತ್ತು ಸಮಾನತೆಯ ರಾಷ್ಟ್ರವನ್ನು ಕಟ್ಟುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರ ಸಂವಿಧಾನ ಸರ್ವೋಚ್ಛವೇ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ವಾಧಿಕಾರಿ ಮನಸ್ಥಿತಿಯ ದುಷ್ಟಶಕ್ತಿಗಳಾದ ಸಂವಿಧಾನದ ಮೇಲೆ ದಾಳಿಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.ರಾಜ್ಯಸಭೆಯಲ್ಲಿನ ಕೇಂದ್ರ ಸಚಿವರ ಅವಹೇಳನವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಿ ಕಾನೂನಿನ ಶಿಕ್ಷೆಗೆ ಗುರಿಪಡಿಸುವಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರಾದ ಎಂ. ಕೃಷ್ಣ, ಹಲ್ಲೆಗೆರೆ ಬೋರಪ್ಪ, ಬಸವರಾಜು, ಅಮ್ಜದ್ಪಾಷ, ನಾಗರತ್ನ, ಶಶಿಕುಮಾರ್, ರಾಜಣ್ಣ, ಎಚ್.ಡಿ. ಜಯರಾಂ, ಮಂಚಶೆಟ್ಟಿ, ಡಿ. ರಮೇಶ್, ಸಿ.ಸಿದ್ದಶೆಟ್ಟಿ, ಗುರುಶಂಕರ್, ಪ್ರದೀಪ್, ವೈರಮುಡಿ, ಜಯರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು.