ಕನಕಗಿರಿಯಲ್ಲಿ ರೈತ ಸಂಘದಿಂದ ಪ್ರತಿಭಟನೆ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

| Published : Oct 28 2025, 12:37 AM IST

ಕನಕಗಿರಿಯಲ್ಲಿ ರೈತ ಸಂಘದಿಂದ ಪ್ರತಿಭಟನೆ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕನಕಗಿರಿಯ ಪಶು ಆಸ್ಪತ್ರೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನಕಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಲ್ಲಿನ ಪಶು ಆಸ್ಪತ್ರೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣ ಸೇರಿ ಗ್ರಾಮೀಣ ಭಾಗದ ರೈತರ ಜಾನುವಾರುಗಳು ರೋಗಕ್ಕೆ ತುತ್ತಾದರೆ ಚಿಕಿತ್ಸೆಗಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಪಶು ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕಾತಿಯಾಗಿಲ್ಲ. ತಾಲೂಕಿನ ನವಲಿ, ಹುಲಿಹೈದರ, ಮುಸಲಾಪುರದ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಸಮಸ್ಯೆ ತಲೆದೋರಿದೆ. ಪಶು ಆಸ್ಪತ್ರೆಗೆ ನಾನಾ ತಳಿಯ ಜಾನುವಾರುಗಳ ಚಿಕಿತ್ಸೆಗಾಗಿ ಸಲಕರಣೆಗಳನ್ನು ಒದಗಿಸಬೇಕು. ಎಪಿಎಂಸಿಗಿದ್ದ ತಡೆಗೋಡೆಯನ್ನು ಪುನರ್ ನಿರ್ಮಿಸಬೇಕು. ಪಟ್ಟಣದಲ್ಲಿ ಮೆಕ್ಕೆಜೋಳ, ಸಜ್ಜೆ, ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಜೆಸ್ಕಾಂ ಎಇಇ ಕಚೇರಿ ಕಾರ್ಯಾರಂಭ ಮಾಡಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಸಚಿವ ಶಿವರಾಜ ತಂಗಡಗಿ ಅವರು ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸುವ ವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದರು. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಸುವ ಯತ್ನ ಮಾಡಿದರು. ಆದರೆ ರೈತರು ಸ್ಪಂದಿಸಲಿಲ್ಲ. ಸಚಿವ ತಂಗಡಗಿ ಬರುವ ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ರೈತ ಮುಖಂಡ ಗಣೇಶರೆಡ್ಡಿ ಹೇಳಿದರು.

ಬಳಿಕ ಸಚಿವರ ಆಪ್ತ ಸಹಾಯಕ ವೆಂಕಟೇಶ ಗೋಡಿನಾಳ ಆಗಮಿಸಿ ಮನವಿ ಸ್ವೀಕರಿಸಿದರು. ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು. ಎಎಸ್‌ಐ ನಿಂಗಪ್ಪ ಹೂಗಾರ, ಪಶು ವೈದ್ಯ ಅರುಣ್ ಗುರು, ರೈತ ಮುಖಂಡರಾದ ಉಮಕಾಂತ ದೇಸಾಯಿ, ಸಗರಪ್ಪ ಕಂಪ್ಲಿ, ತಿಪ್ಪಾರೆಡ್ಡಿ ಹುಲಿಹೈದರ, ವೀರೇಶ, ಮೀರಾಸಾಬ ಇತರರಿದ್ದರು.

ಕಳಪೆ ಭತ್ತದ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಪಟ್ಟು: ಗಂಗಾವತಿ ತಾಲೂಕಿನ ಭಟ್ಟರ ನರಸಾಪುರದ ನೂರಕ್ಕೂ ಹೆಚ್ಚು ರೈತರಿಗೆ ಪಟ್ಟಣದ ಲಲಿತಾ ಟ್ರೇಡರ್ಸ್‌ ಮಾಲೀಕರು ಕಳಪೆ ಬೀಜ ಮಾರಾಟ ಮಾಡಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿತು. ಪ್ರತಿ ಎಕರೆಗೆ ₹೪೫ ಸಾವಿರ ಪರಿಹಾರ ನೀಡಬೇಕು ಎನ್ನುವ ಆಗ್ರಹ ವ್ಯಕ್ತವಾಯಿತು.