ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಶವವಿಟ್ಟು ಪ್ರತಿಭಟನೆ

| Published : Sep 16 2025, 12:03 AM IST

ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಶವವಿಟ್ಟು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸ್ಮಶಾನ ಭೂಮಿಗೆ ತೆರಳುವ ನಕಾಶೆ ರಸ್ತೆ ಒತ್ತುವರಿ ತೆರವುಗೊಳಿಸುವವರೆಗೆ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಪಟ್ಟು ಹಿಡಿದು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಪಾಲಾಬೋವಿದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ರಾಮನಗರ: ಸ್ಮಶಾನ ಭೂಮಿಗೆ ತೆರಳುವ ನಕಾಶೆ ರಸ್ತೆ ಒತ್ತುವರಿ ತೆರವುಗೊಳಿಸುವವರೆಗೆ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಪಟ್ಟು ಹಿಡಿದು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಪಾಲಾಬೋವಿದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಬೀರಯ್ಯ ಸೋಮವಾರ ಬೆಳಿಗ್ಗೆ ವಯೋಸಹಜ ಸಾವನ್ನಪ್ಪಿದ್ದಾರೆ. ಗ್ರಾಮದಿಂದ 200 ಮೀಟರ್ ದೂರದಲ್ಲಿರುವ ಸ್ಮಶಾನಕ್ಕೆ ಮೃತದೇಹವನ್ನು ಹೊತ್ತೊಯ್ಯಲು ದಾರಿ ಇಲ್ಲದಂತಾಗಿತ್ತು. ಕಾಲು ದಾರಿಯಲ್ಲಿ ಅಂತಿಮ ಯಾತ್ರೆ ಸಾಗಲು ಸಾಧ್ಯವಾಗದ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸ್ಮಶಾನಕ್ಕೆ ತೆರಳುವ ನಕಾಶೆ ದಾರಿಯನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿದ್ದಾರೆ. ಅದನ್ನು ತೆರವು ಮಾಡಿ ಅಂತಿಮ ಯಾತ್ರೆ ವ್ಯವಸ್ಥೆ ಮಾಡಿಕೊಡಿ. ಅಲ್ಲಿಯವರೆಗೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಇಂದು ಅಂತ್ಯಕ್ರಿಯೆ ನೆರವೇರಿಸಿ ನಂತರ ಒತ್ತುವರಿ ತೆರವು ಮಾಡಿ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಆದರೆ, ಇವರ ಮಾತನ್ನು ಒಪ್ಪದ ಗ್ರಾಮಸ್ಥರು ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದರು.

ದೂರು ಕೊಟ್ಟರೂ ಪ್ರಯೋಜವಿಲ್ಲ:

ಪಾಲಾಬೋವಿದೊಡ್ಡಿ ಗ್ರಾಮದಲ್ಲಿ ಮುಚ್ಚಿರುವ ಸ್ಮಶಾನದ ರಸ್ತೆಯನ್ನು ತೆರವುಗೊಳಿಸಬೇಕೆಂದು ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಕಳೆದ ಮೂರ್‍ನಾಲ್ಕು ವರ್ಷದಿಂದ ಮನವಿ ಸಲ್ಲಿಸುತ್ತಿದ್ದೇವೆ. ಕೇವಲ ಭರವಸೆ ನೀಡುತ್ತಾರೆಯೇ ಹೊರತು ಈವರೆಗೆ ಸಮಸ್ಯೆ ಬಗೆಹರಿಸಿಲ್ಲ. ಗ್ರಾಮದಲ್ಲಿ ಪ್ರತಿ ಸಾವಾದಾಗಲೂ ಇಂತಹ ದುಸ್ಥಿತಿ ಎದುರಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ ಸ್ಥಳಕ್ಕಾಗಮಿಸಿ ತಹಸೀಲ್ದಾರ್ ತೇಜಸ್ವಿನಿ ಅವರು, ನಕಾಶೆ ರಸ್ತೆ ಮುಚ್ಚಿರುವುದನ್ನು ಪರಿಶೀಲಿಸಿದರು. ನಂತರ ನಕಾಶೆ ರಸ್ತೆ ಅಳತೆ ಮಾಡಿ ಗುರುತು ಕಲ್ಲು ನೆಡಲಾಯಿತು. ಇಂದು ಅಂತ್ಯಕ್ರಿಯೆ ನೆರವೇರಿಸಿ ನಾಳೆಯೇ ಒತ್ತುವರಿ ತೆರವು ಮಾಡಿ ರಸ್ತೆ ಮಾಡಿಕೊಡುವುದಾಗಿ ತಹಸೀಲ್ದಾರ್ ಪ್ರತಿಭಟನಾಕಾರರ ಮನವೊಲಿಸಿದರು. ಇವರ ಭರವಸೆಯನ್ನು ಒಪ್ಪಿದ ಗ್ರಾಮಸ್ಥರು ಸೋಮವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಿದರು.

15ಕೆಆರ್ ಎಂಎನ್ 5,6.ಜೆಪಿಜಿ

5.ರಾಮನಗರ ತಾಲೂಕಿನ ಪಾಲಾಬೋವಿದೊಡ್ಡಿ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರು ಶವವಿಟ್ಟು ಪ್ರತಿಭಟಿಸಿದರು.

6.ಸ್ಮಶಾನಕ್ಕೆ ತೆರಳುವ ಜಾಗ ಒತ್ತುವರಿಯಾಗಿರುವುದು.