ಸಾರಾಂಶ
ಕೋರವಾರ ಗ್ರಾಮದ ವಾರ್ಡ್ ನಂ.4 ಹಾಗೂ 5ರಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಹಲವಾರು ಬಾರಿ ಸಾರ್ವಜನಿಕರು ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಗ್ರಾಪಂ ಮುಂದೆ ಖಾಲಿ ಕೊಡ ಇಟ್ಟು ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿತಾಲೂಕಿನ ಕೋರವಾರ ಗ್ರಾಮದ ವಾರ್ಡ್ ನಂ.4 ಹಾಗೂ 5ರಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಹಲವಾರು ಬಾರಿ ಸಾರ್ವಜನಿಕರು ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಗ್ರಾಪಂ ಮುಂದೆ ಖಾಲಿ ಕೊಡ ಇಟ್ಟು ಪ್ರತಿಭಟಿಸಿದರು.
ತಾಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ ನೇತೃತ್ವದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಬಿರಾದಾರ, ಗ್ರಾಮದಲ್ಲಿ ಸುಮಾರು 25 ಕೊಳವೆ ಹಾಗೂ 3 ತೆರೆದ ಬಾವಿಗಳಿದ್ದು, ಈ ಬಾರಿಯ ಭೀಕರ ಬರಗಾಲ ಹಾಗೂ ಬಿಸಿಲಿನ ತಾಪಕ್ಕೆ ಜನಮೂಲಗಳು ಬತ್ತಿಹೋಗಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹರಿಸಬೇಕು ಇಲ್ಲದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.ನಂತರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಿ.ವಿ. ಪಟ್ಟಣಶೆಟ್ಟಿ ಹಾಗೂ ಅಧ್ಯಕ್ಷರ ಪ್ರತಿನಿಧಿ ರಫೀಕ್ ಬ್ಯಾಕೋಡಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಬಸವಲಿಂಗಪ್ಪ ಬಿರಾದಾರ, ಶಂಕರಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಯಲ್ಲವ್ವ ಬಾಗೇವಾಡಿ, ಸಾಬವ್ವ ಯಾಳವಾರ, ಅನಸೂಬಾಯಿ ಬಿರಾದಾರ, ಸಿದ್ದವ್ವ ಯಾಳವಾರ, ಲಕ್ಷ್ಮಿ ಯಾಳವಾರ, ಸಾವಿತ್ರಿ ಯರಗಲ್, ಶಾಂತಾಬಾಯಿ ತಳವಾರ, ಹುಸೇನಬಿ ಅಂಬಳನೂರ, ಶಾರದ ಭಜಂತ್ರಿ, ರೇಣುಕಾ ಹಡಪದ ಸೇರಿದಂತೆ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.