ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಮುಂಡುಗದೊರೆ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನ ಹಾಗೂ ಜಮೀನಿಗೆ ತೆರಳುವ ಸರ್ಕಾರಿ ಖರಾಬು ರಸ್ತೆಯನ್ನು ತೆರವು ಮಾಡಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಪಟ್ಟಣ ತಾಲೂಕು ಕಚೇರಿ ಎದುರು ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಅರೋಹಾತ್ರಿ ಹೋರಾಟ ಆರಂಭಿಸಿ, ತಹಸೀಲ್ದಾರ್ ಸೇರಿದಂತೆ ತಾಲೂಕು ಆಡಳಿದ ವಿರುದ್ಧ ಆಕ್ರೋಶ ಹೊರಹಾಕಿದರು.

ಗ್ರಾಮದ ಪರಿಶಿಷ್ಟ ಜನಾಂಗದವರಿಗೆ ಸ್ಮಶಾನಕ್ಕೆ ಮತ್ತು ಜಮೀನಿಗೆ ಹೋಗಲು ಮೀಸಲಿಟ್ಟಿರುವ ಸರ್ವೇ ನಂ 351 ರಲ್ಲಿನ ಸಾರ್ವಜನಿಕರ ಬಳಕೆಗೆ ಮೀಸಲಾಗಿದ್ದ ಓಣಿ ಮತ್ತು ರಸ್ತೆ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಒತ್ತುವರಿ ಮಾಡಿದ್ದು, ಸ್ಮಶಾನಕ್ಕೆ ಹೋಗುವ ದಾರಿ ಇಲ್ಲದಂತಾಗಿದೆ. ಇದರಿಂದ ದಲಿತ ಸಮುದಾಯದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶ್ರೀಕಂಠಯ್ಯ ಮಾತನಾಡಿ, ದೊಡ್ಡಪಾಳ್ಯ ಗ್ರಾಮದ ಪಟೇಲ್ ಲೇಟ್ ರಾಮೇಗೌಡ ಅವರ ಮಗ ಈರೇಗೌಡ ಎಂಬುವವರು ತಮ್ಮ ಪ್ರಭಾವ ಬಳಸಿ, ರಸ್ತೆ ಒತ್ತುರವರಿ ಮಾಡಿಕೊಂಡು ತಂತಿ ಬೇಲಿ ನಿರ್ಮಿಸಿದ್ದಾರೆ. ಇದರ ವಿರುದ್ಧ ಕಳೆದ 5 ತಿಂಗಳ ಹಿಂದೆ ಅಹೋರಾತ್ರಿ ಧರಣಿ ಸೇರಿದಂತೆ ಪ್ರತಿಭಟನೆ ನಡೆಸಿ ತಾಲೂಕು ಆಡಳಿತವನ್ನ ಎಚ್ಚರಿಸಲಾಗಿತ್ತು. ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಭರವಸೆ ನೀಡಿದ್ದರು ಆದರೂ ಯಾವುದೇ ಪ್ರಯೋಜವಾಗಿಲ್ಲ. ಹಾಗಾಗಿ ನ್ಯಾಯ ಸಿಗುವ ತನಕ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಶಾಸಕ ರಮೇಶ್‌ ಬಾಬುಬಂಡಿದ್ದೇಗೌಡ ಅವರೂ ಸಹ ಗ್ರಾಮದ ಸಮಸ್ಯೆಯನ್ನ ಬಗೆ ಹರಿಸಿಕೊಡುವುದಾಗಿ ಹೇಳಿದ್ದರು. ಆದರೆ, ಅವರಿಂದಲೂ ಸಹ ತಾಲೂಕು ಆಡಳಿವನ್ನ ಎಚ್ಚರಿಸುವಂತೆ ಕೆಲಸವಾಗಿಲ್ಲ. ಇದರಿಂದ ನಮ್ಮ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ. ಶಾಸಕರಿಂದ ಇದೇ ಧೋರಣೆ ಮುಂದುವರೆದಲ್ಲಿ ಮುಂಬರುವ ಗ್ರಾಪಂ, ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಶಾಸಕರಿಗೆ ಎಚ್ಚರಿಕೆ ನೀಡಿದರು.


ಈ ವೇಳೆ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರವಿಚಂದ್ರ, ರೈತ ಹೋರಾಟಗಾರ ಪಾಂಡು, ಪ.ಜಾ, ಪ.ಪಂ ಹಿತರಕ್ಷಣಾ ಸಮಿತಿ ಸದಸ್ಯ ಮೋಹನ್‌ಕುಮಾರ್, ಮಹದೇವು, ಕೇಶವಮೂರ್ತಿ, ಪ್ರಕಾಶ್, ಪುಟ್ಟಸ್ವಾಮಿ, ಮಹದೇವು, ನಂದೀಶ, ಕಲಾವತಿ ಸೇರಿದಂತೆ ಮುಂಡುಗದೊರೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.