ಸಾರಾಂಶ
ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ತಾಲೂಕಿನ ಹೂಲಿಹಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ಹಾಗೂ ಕಡ್ಡಾಯವಾಗಿ ಎಲ್ಲ ಬಸ್ಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಶನಿವಾರ ಹೂಲಿಹಳ್ಳಿ ಮಾರ್ಗವಾಗಿ ಹೋಗುವ ಎಲ್ಲ ಬಸ್ ಗಳನ್ನು ತಡೆದು ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ತಾಲೂಕು ಉಪಾಧ್ಯಕ್ಷ ಮಹೇಶ ಮರೋಳ ಮಾತನಾಡಿ, ತಾಲೂಕಿನಾದ್ಯಂತ ಸಾರಿಗೆ ಸಂಸ್ಥೆಯ ಶಾಲಾ-ಕಾಲೇಜಿನ ವೇಳೆಗೆ ಸಮರ್ಪಕವಾಗಿ ಬಸ್ಸಿನ ಸೇವೆ ಒದಗಿಸುವಲ್ಲಿ ವಿಫಲವಾಗಿದೆ. ವರ್ಷವಿಡೀ ವಿದ್ಯಾರ್ಥಿಗಳು ಬಸ್ಸಿಗಾಗಿ ಬಿದಿಗೀಳಿದು ಪ್ರತಿಭಟಿಸುವಂತಾಗುತ್ತಿದೆ. ಅಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮದ ಕೆಲ ವಿದ್ಯಾರ್ಥಿ ಮುಖಂಡರು ಅನೇಕ ಬಾರಿ ಮನವಿ ಪತ್ರಗಳನ್ನು ನೀಡಿದ್ದಾರೆ. ಆದರೂ ಘಟಕ ವ್ಯವಸ್ಥಾಪಕರು ಯಾವುದೇ ಬೇಡಿಕೆಗಳಿಗೂ ಸ್ಪಂದಿಸಿಲ್ಲದಿರುವುದು ಬೇಜವಾಬ್ದಾರಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಣಿಬೆನ್ನೂರ ಗ್ರಾಮೀಣ ಠಾಣೆ ಪಿಎಸ್ಐ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಮನವೊಲಿಸಿ ವಿದ್ಯಾರ್ಥಿಗಳ ಪರವಾಗಿ ಘಟಕ ವ್ಯವಸ್ಥಾಪಕರಿಗೆ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಸಂಧಾನ ಸಭೆ ನಡೆಸಿದರು.
ಪುನೀತ್ ಬಣಗಾರ, ವಿನಾಯಕ ಗು. ಬನ್ನಿಹಟ್ಟಿ, ಜೀವನ ಮಲೂರು, ದರ್ಶನ ಮತ್ತೂರು, ಮಹೇಶ ಮೂಡಲಸೀಮಿ, ಚೇತನ್ ಕೆ., ಕಿರಣ್ ಎನ್., ನಿವೇದಿತಾ ಎಸ್., ಮೇಘನಾ ಆರ್.ಡಿ., ಹೇಮಾ ಯು.ಜಿ., ಸವಿತಾ, ಸಹನಾ ಕೆ .ಆರ್., ಶಾರದಾ ಸೇರಿದಂತೆ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಹಾಗೂ ಪೋಲಿಸರು, ಸಾರಿಗೆ ಸಿಬ್ಬಂದಿ ಉಪಸ್ಥಿತರಿದ್ದರು.