28ರಂದು ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ: ಟಿ.ಆರ್. ವಿಜಯಕುಮಾರ್

| Published : Jan 19 2025, 02:20 AM IST

28ರಂದು ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ: ಟಿ.ಆರ್. ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಉಳಿದಂತೆ ಎಂಟು ತಾಲೂಕಿನಲ್ಲಿಯೂ ಸಹ ಪೌರ ಕಾರ್ಮಿಕ ಸಮುದಾಯದವರು ಇರುತ್ತಾರೆ. ಇವರೆಲ್ಲರೂ ಮಾದಿಗ ಸಮುದಾಯಕ್ಕೆ ಸೇರಿದ ಉಪಜಾತಿಗಳಿಗೆ ಸಂಬಂಧಿಸಿದವರಾಗಿರುತ್ತಾರೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಗೊಂದಲಗಳನ್ನು ಬಗೆಹರಿಸಿ ಈ ಸಮುದಾಯಗಳು ಸಮಾನ ಹಂಚಿಕೆಯ ಪಾಲನ್ನು ಪಡೆಯಲು ಮತ್ತೊಂದು ಗಣತಿ ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಗೊಂದಲಗಳನ್ನು ಬಗೆಹರಿಸಿ ಈ ಸಮುದಾಯಗಳು ಸಮಾನ ಹಂಚಿಕೆ ಪಡೆಯಲು ಮತ್ತೊಂದು ಗಣತಿ ಅನಿವಾರ್ಯವಿದ್ದು, ಮೂಲ ಜಾತಿಗಳಿಂದ ದತ್ತಾಂಶವನ್ನು ಕೊಡಬೇಕೆಂದು ಹಾಗೂ ಈಗಾಗಲೇ ಎಲ್.ಜೆ. ಹಾವನೂರು, ಎ.ಜೆ. ಸದಾಶಿವ, ಕಾಂತರಾಜು ಆಯೋಗದ ದತ್ತಾಂಶ ಸರ್ಕಾರದ ಬಳಿ ಇದ್ದು, ಕೂಡಲೇ ಜಾರಿ ಮಾಡುವಂತೆ ಆಗ್ರಹಿಸಿ ಜ.28 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಮಾದಿಗ ದಂಡೋರ ಜಿಲ್ಲಾದ್ಯಕ್ಷ ಟಿ.ಆರ್. ವಿಜಯಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2024ಆಗಸ್ಟ್ 1 ರಂದು ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಒಂದು ಏಕಸದಸ್ಯ ಆಯೋಗವನ್ನು ರಚಿಸಿರುವ ಹಿನ್ನೆಲೆ ಸದರಿ ಆಯೋಗವು 2025 ಜ.1 ರಿಂದ ಕಾರ್ಯಪ್ರವೃತ್ತರಾಗಿರುವುದಕ್ಕೆ ಈ ಆಯೋಗದ ನ್ಯಾಯಮೂರ್ತಿಗಳಿಗೆ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಈ ಆಯೋಗವು ಜ.10 ಪ್ರಾರಂಭವಾಗಿ 2 ತಿಂಗಳುಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ಆಯೋಗವು ಕಾರ್ಯನಿರ್ವಹಿಸಲಿರುವ ಈ ಸಂದರ್ಭದಲ್ಲಿ ಆಯೋಗವು ಈಗಾಗಲೇ ಅನುಬಂಧ ಎ, ಬಿ, ಸಿ, ಡಿ ಗುಂಪುಗಳಲ್ಲಿ 2021 ರಿಂದ 2024 ರವರೆಗಿನ ಮೂರು ವರ್ಷಗಳಿಗೆ ಸಂಬಂಧಿಸಿದ ಕೆಲವೊಂದು ದತ್ತಾಂಶಗಳನ್ನು 101 ಪರಿಶಿಷ್ಟಜಾತಿಗೆ ಸೇರಿದ ಉಪಜಾತಿಗಳನ್ನೂ ಒಳಗೊಂಡು ದತ್ತಾಂಶಗಳನ್ನು ಸಂಗ್ರಹಿಸಲು ಸರ್ಕಾರಿ ಅನುದಾನಿತಕ್ಕೆ ಸಂಬಂಧಿಸಿದ 39 ಇಲಾಖೆಗಳು ನಿಗಮ, ಮಂಡಳಿಗಳನ್ನೂ ಒಳಗೊಂಡಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳಿಗೆ ಸದರಿ ದತ್ತಾಂಶವನ್ನು ಸಂಗ್ರಹಿಸಲು ಸೂಚನೆ ನೀಡಿದ್ದು, ಅಲ್ಲದೇ ಮೂರು ವರ್ಷಗಳ ಅವಧಿಯಲ್ಲಿ 101 ಪರಿಶಿಷ್ಟ ಜಾತಿಗಳು ಮತ್ತು ಅದರ ಒಳಪಂಗಡಗಳು ಪಡೆದಿರುವ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಪಡೆದಿರುವ ಸೀಟುಗಳನ್ನು ಆಧರಿಸಿ ದತ್ತಾಂಶವನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದರು.

ದಾಖಲಾತಿಯನ್ನು ಪ್ರಾರಂಭ ಮಾಡಿದರೆ ಅವರ ಮೂಲ ದತ್ತಾಂಶ ಮತ್ತು ಜನಸಂಖ್ಯೆ ಸರ್ಕಾರಕ್ಕೆ ಮತ್ತು ಆಯೋಗಕ್ಕೆ ಸಿಕ್ಕಿ ಈ ಗೊಂದಲ ನಿವಾರಣೆಯಾಗುತ್ತದೆ. ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಮಾದಿಗ ಸಮಾಜದಲ್ಲಿ ಎಂಟು ತಾಲೂಕಿನಲ್ಲಿ ಮಾದಿಗ ಸಮಾಜದವರಿದ್ದು, ಅರಸೀಕೆರೆ ತಾಲೂಕಿನಲ್ಲಿ ಸಮಗಾರ ಕುಟುಂಬಕ್ಕೆ ಸೇರಿದ 8 ಕುಟುಂಬಗಳಿದ್ದು ಅಲ್ಲದೇ ಅದೇ ಜಾವಗಕಲ್ ಹೋಬಳಿಯ ಜಾವಗಲ್‌ನಲ್ಲಿ 10 ಕುಟುಂಬಗಳು ದೊಕ್ಕಲಿಗ ಸಮಾಜಕ್ಕೆ ಸೇರಿದವರಿದ್ದು ಮತ್ತು ಹಾಸನ ಮತ್ತು ಸಕಲೇಶಪುರದಲ್ಲಿ ತಲಾ 3 ಕುಟುಂಬಗಳು ಸಮಗಾರ ಸಮಾಜಕ್ಕೆ ಸೇರಿದ ಕುಟುಂಬದವರಿರುತ್ತಾರೆ. ಅಲ್ಲದೇ ಆಲೂರಿನಲ್ಲಿ ಮೋಚಿ ಸಮುದಾಯಕ್ಕೆ ಸೇರಿದ 1 ಕುಟುಂಬ ಇರುತ್ತದೆ ಎಂದರು.

ಉಳಿದಂತೆ ಎಂಟು ತಾಲೂಕಿನಲ್ಲಿಯೂ ಸಹ ಪೌರ ಕಾರ್ಮಿಕ ಸಮುದಾಯದವರು ಇರುತ್ತಾರೆ. ಇವರೆಲ್ಲರೂ ಮಾದಿಗ ಸಮುದಾಯಕ್ಕೆ ಸೇರಿದ ಉಪಜಾತಿಗಳಿಗೆ ಸಂಬಂಧಿಸಿದವರಾಗಿರುತ್ತಾರೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಗೊಂದಲಗಳನ್ನು ಬಗೆಹರಿಸಿ ಈ ಸಮುದಾಯಗಳು ಸಮಾನ ಹಂಚಿಕೆಯ ಪಾಲನ್ನು ಪಡೆಯಲು ಮತ್ತೊಂದು ಗಣತಿ ಅನಿವಾರ್ಯವಾಗಿದೆ. ಆದರೆ ಈಗಾಗಲೇ ಎಲ್.ಜಿ. ಹಾವನೂರು, ಎ.ಜೆ.ಸದಾಶಿವ, ಕಾಂತರಾಜು ಆಯೋಗದ ದತ್ತಾಂಶಗಳು ಸರ್ಕಾರದ ಬಳಿ ಇದ್ದು ಸದರಿ ಆಯೋಗದ ವರದಿಗಳನ್ನು ಪರಿಗಣಿಸಿ ಸರ್ಕಾರ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಿ ಅಸಮಾನ ಹಂಚಿಕೆಯನ್ನು ನೀಡಿ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಈ ಮೂಲಕ ಸರ್ಕಾರ ಮತ್ತು ಆಯೋಗವನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು.

ಮಾದಿಗ ದಂಡೋರ ಗೌರವಾಧ್ಯಕ್ಷ ಲಕ್ಷ್ಮಯ್ಯ, ರಾಜ್ಯ ಕಾರ್ಯದರ್ಶಿ ಇಂದ್ರೇಶ್ ಜಾವಗಲ್, ಜಿಲ್ಲಾದ್ಯಕ್ಷ ಸಿ. ರಮೇಶ್, ಮುಖಂಡ ಸತೀಶ್, ಪ್ರವೀಣ್, ಹೇಮಂತ್ ಇದ್ದರು.