ಸಾರಾಂಶ
ಮುಂಡರಗಿ: ಸಿಂಗಟಾಲೂರು ಏತ ನೀರಾವರಿ ಯೋಜನೆಯ ನೀರನ್ನು ತಾಮ್ರಗುಂಡಿ ಕೆರೆಗೆ ಬಿಡುವಂತೆ ಆಗ್ರಹಿಸಿ ಸೋಮವಾರ ಬರದೂರ, ಮುಂಡರಗಿ, ತಾಮ್ರಗುಂಡಿ ರೈತರು ಪ್ರತಿಭಟನೆ ನಡೆಸಿದರು. ಸೋಮವಾರ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಸಿಂಗಟಾಲೂರು ಏತ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಚೇರಿ ಮುಖ್ಯಗೇಟ್ ಬಂದ್ ಮಾಡಿ ದಿಢೀರನೆ ಪ್ರತಿಭಟನೆ ಹಮ್ಮಿಕೊಂಡರು. ಈ ಸಂದರ್ಭದಲ್ಲಿ ರೈತ ಸಂಘದ ಹುಸೇನಸಾಬ್ ಕುರಿ, ಶರಣಪ್ಪ ಕಂಬಳಿ ಮಾತನಾಡಿ, ಮುಂಗಾರು ಮಳೆ ಸರಿಯಾಗಿ ಆಗದೇ ಇರುವುದರಿಂದ ರೈತರ ಬೆಳೆಗಳು ಜಮೀನಿನಲ್ಲಿ ಒಣಗಿ ಹೋಗುತ್ತಿದ್ದು, ಕೆರೆಗೆ ನೀರು ಬಿಡುವಂತೆ ಹಲವು ದಿನಗಳಿಂದ ಇಲಾಖೆ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳುತ್ತ ಬಂದರೂ ನೀರು ಸಹ ಬಿಡುತ್ತಿಲ್ಲ. ಬೀಜ ಗೊಬ್ಬರಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದು, ಮಳೆಯೂ ಆಗುತ್ತಿಲ್ಲ. ಹೀಗಾಗಿ ಕಾಲುವೆ ಮೂಲಕ ತಾಮ್ರಗುಂಡಿ ಕೆರೆಗೆ ನೀರು ಬಿಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಪ್ರಭಾರ ಎಇಇ ಬಸವರಾಜ ಬಿ. ಅವರು ಕೆಲವು ತಾಂತ್ರಿಕ ತೊಂದರೆಗಳಿಂದ ನೀರು ಬಿಟ್ಟಿರಲಿಲ್ಲ, ಬುಧವಾರ ಕಾಲುವೆಗೆ ನೀರು ಬಿಡಲಾಗುತ್ತದೆ. ನಂತರ ಕೆರೆಗೆ ನೀರು ಬಿಡಲಾಗುವುದು ಎಂಬ ಭರವಸೆ ನೀಡಿದರು. ಗುರುವಾರದವರೆಗೆ ಅವಕಾಶ ನೀಡಲಾಗುವುದು. ನೀರು ತುಂಬಿಸದಿದ್ದರೆ ಪುನಃ ಶುಕ್ರವಾರ ಪ್ರತಿಭಟಿಸಲಾಗುವದು ಎಂದು ರೈತರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ನುಚ್ಚಂಬ್ಲಿ, ಮಂಜುನಾಥ ಕಲ್ಲಳ್ಳಿ, ಚಂದ್ರಪ್ಪ ಶಿರಹಟ್ಟಿ, ಬಸಯ್ಯ ಯಲಿಗಾರ, ಮಹೇಶ ಸಜ್ಜನರ, ಬಸಪ್ಪ ವಡ್ಡರ, ಉಮೇಶ ಹೆಗ್ಗಪ್ಪನವರ, ಮೈಲಪ್ಪ ಕವಲೂರ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.