ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಹೆಬ್ಬಳ್ಳಿ ಮತ್ತು ಶಿವಳ್ಳಿ ಗ್ರಾಮಸ್ಥರು ಹೆಬ್ಬಳ್ಳಿ ಅಗಸಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಕೆಲ ಹೊತ್ತು ನವಲಗುಂದ- ಧಾರವಾಡ ರಾಜ್ಯ ಹೆದ್ದಾರಿ ತಡೆ ನಡೆಸಿ, ಪರಿಸರ ವಿರೋಧಿ ಯೋಜನೆ ರದ್ದು ಮಾಡಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.ವಸತಿ ಪ್ರದೇಶಗಳು ಮತ್ತು ಜನವಸತಿಗೆ ತೀರಾ ಹತ್ತಿರವಿರುವ ಹೆಬ್ಬಳ್ಳಿ ಗುಡ್ಡದ ಬಳಿ ಈ ಕಸದ ಘಟಕ ನಿರ್ಮಿಸಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ದೊಡ್ಡ ಭೀತಿಯಿದೆ. ಹೆಬ್ಬಳ್ಳಿ ಗುಡ್ಡದ ಬಳಿ ಪ್ರಸ್ತುತ ನಡೆಯುತ್ತಿರುವ ಘನತ್ಯಾಜ್ಯ ಘಟಕದ ಕಾಮಗಾರಿಯನ್ನು ಪಾಲಿಕೆಯು ತಕ್ಷಣವೇ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಕಸ ಸುರಿಯಲು ಬಿಡುವುದಿಲ್ಲ, ಪಾಲಿಕೆಯು ತಕ್ಷಣವೇ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಮಧ್ಯೆ ಈ ವಿಷಯದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಈ ಘಟಕದಿಂದ ವಾಯು, ಜಲ ಅಥವಾ ಮಣ್ಣಿನ ಮಾಲಿನ್ಯ ಉಂಟಾಗುವುದಿಲ್ಲ. ಹೀಗಾಗಿಯೇ ಈ ಯೋಜನೆಗೆ ಪರಿಸರ ಇಲಾಖೆಯಿಂದ ಅಗತ್ಯ ಅನುಮತಿ ಹಾಗೂ ಪ್ರಮಾಣಪತ್ರ ದೊರೆತಿದೆ. ಘಟಕದಲ್ಲಿ ಬಯೋಗ್ಯಾಸ್ ಉತ್ಪಾದನೆಯಾಗಲಿದ್ದು, ಇದರಿಂದ ರೈತರಿಗೆ ಅನುಕೂಲ. ಅಲ್ಲದೆ, ನೀರಾವರಿ ಮತ್ತು ಸಾವಯವ ಗೊಬ್ಬರ ಉತ್ಪಾದನೆಗೂ ಈ ಯೋಜನೆ ನೆರವಾಗಲಿದೆ ಎಂದು ತಿಳಿಸಿದರು.ಈ ಘಟಕದ ಬಗ್ಗೆ ಗ್ರಾಮಸ್ಥರು, ರೈತರು ಹಾಗೂ ಹೋರಾಟಗಾರರಲ್ಲಿ ಇರುವ ಆತಂಕ ನಿವಾರಿಸಲು ಅವರಿಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಲಾಗುವುದು. ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಗ್ರಾಮಸ್ಥರು ನಡೆಸಿರುವ ಪ್ರತಿಭಟನೆ ಕುರಿತು ಸರ್ಕಾರಕ್ಕೆ ವರದಿ ಸಹ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.