ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಹೆಬ್ಬಳ್ಳಿ ಮತ್ತು ಶಿವಳ್ಳಿ ಗ್ರಾಮಸ್ಥರು ಹೆಬ್ಬಳ್ಳಿ ಅಗಸಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೆಲ ಹೊತ್ತು ನವಲಗುಂದ- ಧಾರವಾಡ ರಾಜ್ಯ ಹೆದ್ದಾರಿ ತಡೆ ನಡೆಸಿ, ಪರಿಸರ ವಿರೋಧಿ ಯೋಜನೆ ರದ್ದು ಮಾಡಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ವಸತಿ ಪ್ರದೇಶಗಳು ಮತ್ತು ಜನವಸತಿಗೆ ತೀರಾ ಹತ್ತಿರವಿರುವ ಹೆಬ್ಬಳ್ಳಿ ಗುಡ್ಡದ ಬಳಿ ಈ ಕಸದ ಘಟಕ ನಿರ್ಮಿಸಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ದೊಡ್ಡ ಭೀತಿಯಿದೆ. ಹೆಬ್ಬಳ್ಳಿ ಗುಡ್ಡದ ಬಳಿ ಪ್ರಸ್ತುತ ನಡೆಯುತ್ತಿರುವ ಘನತ್ಯಾಜ್ಯ ಘಟಕದ ಕಾಮಗಾರಿಯನ್ನು ಪಾಲಿಕೆಯು ತಕ್ಷಣವೇ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಇಲ್ಲಿ ಕಸ ಸುರಿಯಲು ಬಿಡುವುದಿಲ್ಲ, ಪಾಲಿಕೆಯು ತಕ್ಷಣವೇ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಮಧ್ಯೆ ಈ ವಿಷಯದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಈ ಘಟಕದಿಂದ ವಾಯು, ಜಲ ಅಥವಾ ಮಣ್ಣಿನ ಮಾಲಿನ್ಯ ಉಂಟಾಗುವುದಿಲ್ಲ. ಹೀಗಾಗಿಯೇ ಈ ಯೋಜನೆಗೆ ಪರಿಸರ ಇಲಾಖೆಯಿಂದ ಅಗತ್ಯ ಅನುಮತಿ ಹಾಗೂ ಪ್ರಮಾಣಪತ್ರ ದೊರೆತಿದೆ. ಘಟಕದಲ್ಲಿ ಬಯೋಗ್ಯಾಸ್ ಉತ್ಪಾದನೆಯಾಗಲಿದ್ದು, ಇದರಿಂದ ರೈತರಿಗೆ ಅನುಕೂಲ. ಅಲ್ಲದೆ, ನೀರಾವರಿ ಮತ್ತು ಸಾವಯವ ಗೊಬ್ಬರ ಉತ್ಪಾದನೆಗೂ ಈ ಯೋಜನೆ ನೆರವಾಗಲಿದೆ ಎಂದು ತಿಳಿಸಿದರು.

ಈ ಘಟಕದ ಬಗ್ಗೆ ಗ್ರಾಮಸ್ಥರು, ರೈತರು ಹಾಗೂ ಹೋರಾಟಗಾರರಲ್ಲಿ ಇರುವ ಆತಂಕ ನಿವಾರಿಸಲು ಅವರಿಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಲಾಗುವುದು. ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಗ್ರಾಮಸ್ಥರು ನಡೆಸಿರುವ ಪ್ರತಿಭಟನೆ ಕುರಿತು ಸರ್ಕಾರಕ್ಕೆ ವರದಿ ಸಹ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.