ಸಾರಾಂಶ
ಹೊಸಪೇಟೆ: ರಾಜ್ಯದಲ್ಲಿ ಆರು ವರ್ಷದೊಳಗಿನ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ತೆರಳಲು ಯೋಜನೆ ರೂಪಿಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಶಾಸಕ ಎಚ್.ಆರ್. ಗವಿಯಪ್ಪ ನಿವಾಸದ ಎದುರು ಪ್ರತಿಭಟನೆ ನಡೆಯಿತು.ಕೆಕೆಆರ್ಡಿಬಿ ಅನುದಾನದಿಂದ 1008 ಎಲ್ಕೆಜಿ, ಯುಕೆಜಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಶಿಕ್ಷಣ ಇಲಾಖೆ ಬಳಿ ಹಣ ಇಲ್ಲದೇ ಇದ್ದಾಗ ನಿರ್ವಹಣೆ ಹೇಗೆಂಬ ಪ್ರಶ್ನೆ ಏಳುತ್ತದೆ. ಇದರ ಬದಲಿಗೆ 1008 ಅಂಗನವಾಡಿ ಕೇಂದ್ರಗಳನ್ನುಗುರುತಿಸಿ ಅಲ್ಲಿಯೇ ಈ ತರಗತಿಗಳನ್ನು ಪ್ರಾರಂಭಿಸಲು ಕ್ರಮವಹಿಸಬೇಕು. ಈಗಾಗಲೇ ಶಿಕ್ಷಣ ಇಲಾಖೆಯಲ್ಲಿರುವ ಎಲ್ಕೆಜಿ, ಯುಕೆಜಿ ಮತ್ತು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳ ಒಟ್ಟು ಸ್ಥಿತಿ ಬಗ್ಗೆ ಅಧ್ಯಯನ ನಡೆಸಬೇಕು. ಅಂಗನಾಡಿ ಯೋಜನೆಯಡಿ ಇರುವ ಮಕ್ಕಳ ಸ್ಥಿತ-ಗತಿ ಬಗ್ಗೆಯೂ ಅಧ್ಯಯನ ನಡೆಸಬೇಕು ಎಂದು ಆಗ್ರಹಿಸಿದರು.
ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು ಹಾಗೂ ಅಂಗನವಾಡಿ ಸಂಘದ ಪ್ರತಿನಿಧಿಗಳು ಮತ್ತು ಇಲಾಖೆಗಳ ಪ್ರಮುಖರನ್ನೊಳಗೊಂಡ ಸಮಿತಿ ಕಾಲ ಮಿತಿಯೊಳಗೆ ವರದಿ ಸಲ್ಲಿಸಬೇಕು. ಈ ವರದಿ ಬರುವ ತನಕ ಶಿಕ್ಷಣ ಇಲಾಖೆ ಹೊಸದಾಗಿ ಇಸಿಸಿಡಿಯನ್ನು ಪ್ರಾರಂಭಿಸದಂತೆ ಸೂಚಿಸಬೇಕು. ಅಂಗನವಾಡಿ ಯೋಜನೆ ಉಳಿಸಲು ಎಲ್ಲ ಪ್ರಯತ್ನ ಮಾಡಬೇಕು. ಈ ಯೋಜನೆಗೆ ಹೊಡೆತ ಬೀಳದಂತೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ. ಕೆ. ನಾಗರತ್ನಮ್ಮ, ಜಿ. ಶಕುಂತಲಾ, ಕೆ.ಎಂ. ಸ್ವಪ್ನ ಮತ್ತಿತರರಿದ್ದರು.