ಪರೀಕ್ಷಾ ಅಕ್ರಮಗಳ ಹೊಣೆಗಾರಿಕೆಗಾಗಿ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಹರಪನಹಳ್ಳಿ: ದೆಹಲಿಯಲ್ಲಿ ನಿರಶನ ನಿರತ ಸೋನಮ್ ವಾಂಗ್ ಚುಕ್ ಅವರೊಂದಿಗೆ ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ಆರಂಭಿಸಬೇಕು ಹಾಗೂ ಪರೀಕ್ಷಾ ಅಕ್ರಮಗಳ ಹೊಣೆಗಾರಿಕೆಗಾಗಿ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸೋನಮ್ ವಾಂಗ್ ಚುಕ್ ಉಪವಾಸ ನಿರತ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ತಕ್ಷಣದ ನೇರ ಹಾಗೂ ಸದುದ್ದೇಶ ಪೂರ್ವಕವಾಗಿ ಮಾತುಕತೆ ಆರಂಭಿಸಬೇಕು. ಆಪಾದಿತ ಪರೀಕ್ಷಾ ಪತ್ರಿಕೆ ಸೋರಿಕೆ ಅಕ್ರಮಗಳು ಆಡಳಿತಾತ್ಮಕ ವೈಫಲ್ಯಗಳು ಮತ್ತು ಸಂಬಂಧಿತ ನಿರ್ಲಕ್ಷ್ಯದ ಕೃತ್ಯಗಳ ಬಗ್ಗೆ ಕಾಲಮಿತಿಯೊಳಗೆ ನ್ಯಾಯಾಂಗ ತನಿಖೆ ನಡೆಸಬೇಕು.ಸಚಿವರ ಜವಾಬ್ದಾರಿ, ಪ್ರಜಾಸತ್ಮಾಕ ಹೊಣೆಗಾರಿಕೆ ತತ್ವಗಳಿಗೆ ಅನುಗುಣವಾಗಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು. ಪರೀಕ್ಷಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೇರ ಪರಶುರಾಮ, ಐಸಾ ಸಂಘಟನೆಯ ರಾಜ್ಯ ಸಂಚಾಲಕ ಸಮಿತಿ ಸದಸ್ಯ ಸಂತೋಷ ಗುಳೇದಹಟ್ಟಿ, ಮೋಹನ್ ಕುಮಾರ, ತಾಲೂಕು ಅಧ್ಯಕ್ಷ ತಿಲಕ್, ಕೃಷ್ಣಕುಮಾರ, ಮನು, ಮಣಿಕಂಠ, ಶಶಿ, ಗೌತಮಿ, ತೇಜಸ್ವಿನಿ, ಪ್ರಾರ್ಥನಾ, ರಕ್ಷಿತಾ, ಉಷಾ, ಭರತ್, ಕೆ.ಮಿಥುನ್, ಸುದೀಪ, ಕೆ.ದರ್ಶನ ಇತರರು ಪಾಲ್ಗೊಂಡಿದ್ದರು.