ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಬಿಕ್ಕೋಡು ರಸ್ತೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಂಭಾಗದ ದೀನದಯಾಳ್ ಉಪಾಧ್ಯಾಯ ಬಡಾವಣೆಯಲ್ಲಿ ಓಡಾಡಲು ರಸ್ತೆ ಇಲ್ಲದೆ ಸಮಸ್ಯೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ರಸ್ತೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.ಬಡಾವಣೆ ನಿವಾಸಿ ಗಿರೀಶ್ ಮಾತನಾಡಿ, ಇಲ್ಲಿ ರಸ್ತೆ ನಕಾಶೆಯಲ್ಲಿದ್ದು ಅದನ್ನು ಸರಿಪಡಿಸಿಲ್ಲ. ಈ ಬಗ್ಗೆ ಪುರಸಭೆಯವರನ್ನು ಕೇಳಿದರೆ ಈ ಜಾಗ ಬೇರೆಯವರಿಗೆ ಸೇರುತ್ತೆ ಎಂದು ಹಿಂಬರಹ ಹಾಕಿ ಕಳಿಸಿದ್ದಾರೆ. ಲೇಔಟ್ ಪ್ಲಾನ್ನಲ್ಲಿ ರಸ್ತೆ ಅಂತ ಇದೆ. ಅದೇ ರಸ್ತೆಯಲ್ಲಿ ಮೂರು ವರ್ಷದಿಂದ ಓಡಾಡಿದ್ದೇವೆ ಎಂದರು. ಈಗ ರಸ್ತೆ ಜಾಗದಲ್ಲಿ ಬೇಲಿ ಹಾಕಿದ್ದಾರೆ. ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದ ಹಲವು ಬಾರಿ ಹೇಳಿದರೂ ಯಾರೂ ಗಮನ ಹರಿಸುತ್ತಿಲ್ಲ. ಶಾಸಕರೂ ಗಮನಹರಿಸಿಲ್ಲ. ತಹಸೀಲ್ದಾರ್ ಅವರನ್ನು ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಪುರಸಭೆಯವರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದವರನ್ನು ಕೇಳಿ ಎಂದು ಹೇಳುತ್ತಾರೆ ಎಂದು ಗಿರೀಶ್ ಹೇಳಿದರು.
ಎಂಟು ಮನೆಗಳಿಗೆ ರಸ್ತೆ ಅಗತ್ಯವಾಗಿ ಬೇಕಾಗಿದೆ. ಜಿಲ್ಲಾಧಿಕಾರಿಯವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡೆವು. ಅವರು ತಹಶೀಲ್ದಾರ್ರವರಿಗೆ ಹೇಳಿ ಸರ್ವೆಯವರನ್ನು ಕಳಿಸಿಕೊಟ್ಟರು. ಲೇಔಟ್ ಪ್ಲಾನ್ ತಪ್ಪಿದೆ ಎಂದು ಹೇಳಿ ಅವರು ಕೂಡ ಸುಮ್ಮನಾದರು. ಓಡಾಡಲು ರಸ್ತೆ ಇಲ್ಲದೆ ತುಂಬಾ ತೊಂದರೆಯಾಗಿದೆ. ಆದಷ್ಟು ಬೇಗ ಇದಕ್ಕೊಂದು ಪರಿಹಾರ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದರು.ನಿವಾಸಿ ಪ್ರಸನ್ನ ಮಾತನಾಡಿ, ಕಳೆದ ೧೦ ವರ್ಷದಿಂದ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದು ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಜನಪ್ರತಿನಿಧಿಗಳು ಇತ್ತಕಡೆ ತಿರುಗಿ ಕೂಡ ನೋಡಿಲ್ಲ. ಜಿಲ್ಲಾಧಿಕಾರಿ, ಪುರಸಭೆ, ಶಾಸಕರಿಗೂ ಮನವಿ ಮಾಡಿದ್ದೇವೆ. ಇಲ್ಲಿ ಚರಂಡಿ, ರಸ್ತೆ ಸರಿಯಾಗಿಲ್ಲ. ಯುಜಿಡಿ ಸಮಸ್ಯೆ ಕೂಡ ಇದ್ದು ಕೂಡಲೇ ಇದನ್ನು ದುರಸ್ತಿ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳಾದ ಮೋಹನ್ಕುಮಾರ್, ದಾಸಪ್ಪ, ಭಾಗ್ಯಮ್ಮ, ಮೈತ್ರಿ, ಪುಷ್ಪ, ಗೌರಮ್ಮ ಮಂಜುಳಮ್ಮ, ಇತರರು ಇದ್ದರು.