ಸಾರಾಂಶ
ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ ನೀತಿ, ರೈತವಿರೋಧಿ ನೀತಿಗಳ ವಿರುದ್ಧ ಪ್ರಬಲ ರೈತ, ಕಾರ್ಮಿಕ ಚಳವಳಿಯನ್ನು ಬೆಳೆಸಲು ರಾಷ್ಟ್ರವ್ಯಾಪಿ ನೀಡಿರುವ ಕರೆಯ ಮೇರೆಗೆ ನಗರದ ಶ್ರೀ ಜಯದೇವ ವೃತ್ತದಲ್ಲಿ ಶುಕ್ರವಾರ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
- 3 ದಿನಗಳ ಜನತಾ ಅಧಿವೇಶನ ಕರೆಯಲು ಸಿಎಂಗೆ ಆಗ್ರಹ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ ನೀತಿ, ರೈತವಿರೋಧಿ ನೀತಿಗಳ ವಿರುದ್ಧ ಪ್ರಬಲ ರೈತ, ಕಾರ್ಮಿಕ ಚಳವಳಿಯನ್ನು ಬೆಳೆಸಲು ರಾಷ್ಟ್ರವ್ಯಾಪಿ ನೀಡಿರುವ ಕರೆಯ ಮೇರೆಗೆ ನಗರದ ಶ್ರೀ ಜಯದೇವ ವೃತ್ತದಲ್ಲಿ ಶುಕ್ರವಾರ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಸಂಘಟನೆ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರವು ರೈತರ ಐತಿಹಾಸಿಕ ಹೋರಾಟದ ವೇಳೆ ಲಿಖಿತ ರೂಪದಲ್ಲಿ ನೀಡಿದ್ದ ಭರವಸೆ ಈಡೇರಿಸಬೇಕು. ತಕ್ಷಣವೇ ರೈತ, ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆ ಪುನಾರಂಭಿಸಬೇಕು. ರೈತರ ಬೆಳೆಗಳಿಗೆ ಕನಿಷ್ಠ ದರ ಕಾಯ್ದೆ ಜಾರಿಗೊಳಿಸಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₹27 ಸಾವಿರ ವೇತನ ಹಾಗೂ ಸಾಮಾಜಿಕ ಭದ್ರತೆ ಖಾತ್ರಿಪಡಿಸಬೇಕು ಎಂದರು.
ದಮನಿತ ಸಮುದಾಯಗಳಿಗೆ ರಕ್ಷಣೆ, ಯುವಜನರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಸೌಹಾರ್ದದ ವಾತಾವರಣ ನಿರ್ಮಿಸಬೇಕು. ಜಿಎಸ್ಟಿ ಮತ್ತು ಸೆಸ್ ತಗ್ಗಿಸುವ ಮೂಲಕ ಬೆಲೆ ಏರಿಕೆ ಇಳಿಸಬೇಕು. ಸಂಘಟನೆಯ ಬೇಡಿಕೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಹೋರಾಟ ಮತ್ತೆ ರಾಷ್ಟ್ರ ರಾಜಧಾನಿಗೂ ಕಾಲಿಡಬೇಕಾದೀತು ಎಂದು ಎಚ್ಚರಿಸಿದರು.ರಾಜ್ಯ ಸರ್ಕಾರ ವಿವಿಧ ಜನಸಮುದಾಯಗಳ ಬದುಕಿಗೆ ಸಂಬಂಧಿಸಿದಂತೆ ಕೂಲಂಕುಷ ಚರ್ಚಿಸಿ, ನಿರ್ದಿಷ್ಟ ತೀರ್ಮಾನ ಕೈಗೊಳ್ಳಲು ಮೂರು ದಿನಗಳ ಜನತಾ ಅಧಿವೇಶನ ಕರೆಯಬೇಕು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಎಲ್ಲ ಸಂಪುಟ ದರ್ಜೆ ಸಚಿವರು, ಸಂಬಂಧಿಸಿದ ಉನ್ನತ ಅಧಿಕಾರಿಗಳು ಹಾಗೂ ವಿವಿಧ ಜನಪರ ಚಳವಳಿಗಳ ಮುಖಂಡರ ಜತೆ ಚರ್ಚಿಸಿ, ಮುಖ್ಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಹೊನ್ನೂರು ಮುನಿಯಪ್ಪ, ಆವರಗೆರೆ ಎಚ್.ಜಿ.ಉಮೇಶ, ಮಧು ತೊಗಲೇರಿ, ಸಂಚಾಲನಾ ಸಮಿತಿಯ ಇ.ಶ್ರೀನಿವಾಸ, ಸತೀಶ ಅರವಿಂದ, ಆದಿಲ್ ಖಾನ್, ಗುಮ್ಮನೂರು ಬಸವರಾಜ, ಬುಳ್ಳಾಪುರ ಹನುಮಂತಪ್ಪ, ಜೆಸಿಟಿಯು ಮುಖಂಡರಾದ ಆವರಗೆರೆ ಚಂದ್ರು, ಮಂಜುನಾಥ ಕುಕ್ಕವಾಡ, ಕೆ.ಎಚ್.ಆನಂದರಾಜು ಇತರರು ಪಾಲ್ಗೊಂಡಿದ್ದರು.- - - -22ಕೆಡಿವಿಜಿ1:
ದಾವಣಗೆರೆಯಲ್ಲಿ ಶುಕ್ರವಾರ ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ, ರೈತವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ-ಕರ್ನಾಟಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.