ಪಡಿತರ ಅಂಗಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಮಾಡಿದ್ದ ಮಹಿಳೆಯ ವಿರುದ್ಧ ಕ್ರಮ ಜರುಗಿಸದ ಆಹಾರ ಇಲಾಖೆ ಕ್ರಮ ಖಂಡಿಸಿ ಗ್ರಾಮಸ್ಥರು ಆಹಾರ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಘಟನೆ ಗುರುವಾರ ತಾಲೂಕಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ಪಡಿತರ ಅಂಗಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಮಾಡಿದ್ದ ಮಹಿಳೆಯ ವಿರುದ್ಧ ಕ್ರಮ ಜರುಗಿಸದ ಆಹಾರ ಇಲಾಖೆ ಕ್ರಮ ಖಂಡಿಸಿ ಗ್ರಾಮಸ್ಥರು ಆಹಾರ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಘಟನೆ ಗುರುವಾರ ತಾಲೂಕಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.ಘಟನೆ ವಿವರ : ಕಳೆದ ತಿಂಗಳು ಜು.27 ರಂದು ಕೊಡಿಗೆಹಳ್ಳಿ ಗ್ರಾಮದಲ್ಲಿರುವ ರಾಮಚಂದ್ರಯ್ಯ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ತೂಬಿನ ಕೆರೆಯ ಗ್ರಾಮದ ಪ್ರಭಾಕರ್ ಎಂಬ ವ್ಯಕ್ತಿ ತನ್ನ ಪಾಲಿನ ಪಡಿತರ ತೆಗೆದುಕೊಳ್ಳಲು ಹೋದಾಗ ಕಡಿಮೆ ತೂಕದ ಬಗ್ಗೆ ಪ್ರಶ್ನಿಸಿದ್ದ. ಇದರಿಂದ ಕುಪಿತಕೊಂಡ ರಾಮಚಂದ್ರಪ್ಪನ ಪತ್ನಿ ಚಿಕ್ಕಮ್ಮ ಪ್ರಶ್ನಿಸಿದ ಪ್ರಭಾಕರನ ಮೇಲೆ ಹಲ್ಲೆ ಮಾಡಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂಬಂಧ ಪಡಿತರ ಸಮಸ್ಯೆ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ನೀಡಲಾಗಿತ್ತು.ಒಂದು ತಿಂಗಳು ಕಳೆದರೂ ಸಮಸ್ಯೆಗೆ ಪರಿಹಾರ ನೀಡುವಲ್ಲಿ ದೂರಿನ ಬಗ್ಗೆ ಕ್ರಮ ವಹಿಸುವಲ್ಲಿ ಅಧಿಕಾರಿಗಳು ತೋರಿದ ಬೇಜವಾಬ್ದಾರಿ ತನದಿಂದ ಬೇಸತ್ತು ಗ್ರಾಮಸ್ಥರು ಗ್ರಾಮದ ಯುವಕನ ಮೇಲೆ ಹಲ್ಲೆ ಮಾಡಿದ ರಾಮಚಂದ್ರಪ್ಪನ ಪಡಿತರ ಅಂಗಡಿಗೆ ಹೋಗಿ ತಮ್ಮ ಪಾಲಿನ ರೇಷನ್ ಖರೀದಿಸದಂತೆ ನಿರ್ಧರಿಸಿದ್ದರು. ಅದರಂತೆ ಗ್ರಾಮಸ್ಥರು ಗ್ರಾಮದ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಜಮಾವಣೆಗೊಂಡ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಘಟನೆ ವಿಚಾರ ತಿಳಿದು ಸ್ಥಳಕ್ಕೆ ಬಂದ ಆಹಾರ ನಿರೀಕ್ಷಕರಾದ ಶ್ರೀಹರ್ಷ ಬಳಿ ದೂರು ನೀಡಿದ ವ್ಯಕ್ತಿ ಹಾಗೂ ಗ್ರಾಮಸ್ಥರು ಪ್ರತಿಪಡಿತರದಾರರು ಅಂಗಡಿಗೆ ಹೋದಾಗ 20 ರುಪಾಯಿಗಳನ್ನು ನೀಡುವಂತೆ ಪೀಡಿಸುತ್ತಾರೆ. ಹಣ ನೀಡದವರಿಗೆ ತಲಾ 4 ಕೆಜಿ ಅಕ್ಕಿ ಕಡಿಮೆ ನೀಡುತ್ತಾರೆ ಎಂದು ದೂರಿದರು. ಅಕ್ಕಿಯಲ್ಲಿ ಕಸ ಕಡ್ಡಿ ದೂಳು ಮಣ್ಣು ಸೇರಿದಂತೆ ಕಶ್ಮಲಗಳು ಇರುತ್ತವೆ ಇದನ್ನು ಪ್ರಶ್ನಿಸಿದರೆ ಸರ್ಕಾರವನ್ನು ಕೇಳು ಎಂದು ಹೇಳುತ್ತಾರೆ ಸರ್ಕಾರ ನೀಡುವ ರಾಗಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಾರಾಟ ಮಾಡಿ ಕಳಪೆ ರಾಗಿ ಯನ್ನು ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ ಎಂದು ಹಾರಿಕೆಯ ಉತ್ತರ ನೀಡಿದಾಗ ಆಕ್ರೋಶಗೊಂಡ ಸ್ಥಳೀಯರು ಸ್ಥಳಕ್ಕೆ ಶಾಸಕರು ಬರುವ ತನಕ ನಾವು ನಿಮ್ಮನ್ನು ಕಳುಹಿಸುವುದಿಲ್ಲ ಎಂದು ಅಧಿಕಾರಿಗಳ ಕಾರು ಸುತ್ತುವರೆದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕುಣಿಗಲ್ ಶಾಸಕ ಡಾ. ರಂಗನಾಥ್ ಮಾತನಾಡಿ ಪಡಿತರ ಅಂಗಡಿಯಲ್ಲಿ ನಡೆದಿರುವ ಘಟನೆ ಬಗ್ಗೆ ನನಗೆ ಮನವರಿಕೆಯಿದೆ ತಕ್ಷಣ ಅಲ್ಲಿಂದ ಪಡಿತರವನ್ನು ಅಮೃತೂರು ಪಡಿತರ ಅಂಗಡಿಗಳಿಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿ. ತಡವಾದಲ್ಲಿ ನಿಮ್ಮ ಹಣದಿಂದ ಗ್ರಾಮಸ್ಥರಿಗೆ ಪಡಿತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿ. ಮುಂದಿನ ದಿನಗಳಲ್ಲಿ ತೂಬಿನಕೆರೆಯ 270 ಕಾರ್ಡ್ , ಚಿನ್ನಹಳ್ಳಿ ಯ 70 ಕಾರ್ಡ್ ಹಾಗೂ ಇಂದಿರಾನಗರದ 630 ಕಾರ್ಡ್ ಒಟ್ಟುಪಡಿಸಿ ಉಪ ಪಡಿತರ ಕೇಂದ್ರ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮುಖಂಡ ಶಿವಶಂಕರ. ದೇವರಾಜು, ರಾಮಣ್ಣ , ಕಿಟ್ಟಿ , ಲಕ್ಷ್ಮಣ , ಗಂಗಮ್ಮ ತಿಮ್ಮಮ್ಮ ಸೇರಿದಂತೆ ಇತರರು ಇದ್ದರು.