ಬಾಗಲಕೋಟೆ ಘಟನೆಯ ನಿಜವಾದ ಆರೋಪಿಗಳನ್ನು ಬಂಧಿಸಿಲ್ಲ. ಕೇವಲ ಎಂಟು ಜನರನ್ನು ಬಂಧಿಸಲಾಗಿದೆ ಎಂದ ಅವರು, ಈ ಘಟನೆಯಲ್ಲಿ ನೂರಾರು ಜನರು ಭಾಗಿಯಾಗಿದ್ದ್ಉ ಎಲ್ಲರನ್ನು ಬಂಧಿಸಬೇಕು. ಇಂದು ನಡೆದಿರುವ ಪ್ರತಿಭಟನೆ ಬರೀ ಎಚ್ಚರಿಕೆ ಅಷ್ಟೇ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

ಹುಬ್ಬಳ್ಳಿ:

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯ ಅಂಗವಾಗಿ ನಡೆದ ಮೆರವಣಿಗೆ ಮೇಲಿನ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆತ ಘಟನೆ ಖಂಡಿಸಿ ನಗರದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.ಇಲ್ಲಿನ ಅಂಬೇಡ್ಕರ್‌ ಸರ್ಕಲ್‌ ಬಳಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮೆಯಾಗಿ ಬೃಹತ್‌ ಪ್ರತಿಭಟನೆ ನಡೆಸಿದರು.

ಮಾನವ ಸರಪಳಿ ರಚಿಸುವ ಮೂಲಕ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಲ್ಲು, ಚಪ್ಪಲಿ ತೂರಿದವರನ್ನು ಮನೆ ಹೊಕ್ಕು ಹೊಡೆಯಬೇಕು ಎಂಬೆಲ್ಲ ಘೋಷಣೆ ಮೊಳಗಿದವು. ಕಲ್ಲು, ಚಪ್ಪಲಿ ತೂರಿ ಸಮಾಜದ ಶಾಂತಿ ಕದಡಿದ ದುಷ್ಕರ್ಮಿಗಳನ್ನು ಗಡೀಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಿವಾಜಿಯ ಪುತ್ಥಳಿ ಹಿಡಿದುಕೊಂಡು ಮೆರವಣಿಗೆ ನಡೆಸಿದರು. ನಂತರ ಪ್ರತಿಭಟನಾ ಸಮಾವೇಶದಲ್ಲಿ ಶಿವಾಜಿ ಪುತ್ಥಳಿಯನ್ನು ಮಧ್ಯದಲ್ಲಿಟ್ಟುಕೊಂಡು ಸಮಾವೇಶ ನಡೆಸಲಾಯಿತು.

ಈ ವೇಳೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ, ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲು, ಚಪ್ಪಲಿ ಎಸೆದಿದ್ದಾರೆ. ಆ ಜಿಹಾದಿ ದುಷ್ಕರ್ಮಿಗಳನ್ನು ಗಡೀಪಾರು ಮಾಡಬೇಕು. ಇಲ್ಲವಾದರೆ ಮಸೀದಿಗೆ ಹೊಕ್ಕು ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಅಂದಿನ ಘಟನೆಯ ನಿಜವಾದ ಆರೋಪಿಗಳನ್ನು ಬಂಧಿಸಿಲ್ಲ. ಕೇವಲ ಎಂಟು ಜನರನ್ನು ಬಂಧಿಸಲಾಗಿದೆ ಎಂದ ಅವರು, ಈ ಘಟನೆಯಲ್ಲಿ ನೂರಾರು ಜನರು ಭಾಗಿಯಾಗಿದ್ದ್ಉ ಎಲ್ಲರನ್ನು ಬಂಧಿಸಬೇಕು. ಇಂದು ನಡೆದಿರುವ ಪ್ರತಿಭಟನೆ ಬರೀ ಎಚ್ಚರಿಕೆ ಅಷ್ಟೇ. ಮುಂದೆ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದರು. ರಾಜ್ಯ ಸರ್ಕಾರದ ತುಷ್ಟೀಕರಣ ಇದಕ್ಕೆ ಕಾರಣ. ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಹೆಚ್ಚು ಸಲುಗೆ ಕೊಟ್ಟಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಶ್ರೀರಾಮಸೇನೆ ಗೌರವ ರಾಜ್ಯಾಧ್ಯಕ್ಷ ಸತ್ಯಪ್ರಮೋದ್ ತೀರ್ಥ ಸ್ವಾಮೀಜಿ, ಮಾತಾಜಿ, ಭಗತ್ ಸಿಂಗ್ ಯುವಕ ಮಂಡಳ ಅಧ್ಯಕ್ಷ ವಿಶಾಲ ಜಾಧವ, ಹಿಂದು ಜಾಗರಣಾ ವೇದಿಕೆ ಪ್ರಮುಖ ಶ್ರೀಧರ ಕುಲಕರ್ಣಿ, ಗುರು ಪಾಟೀಲ್, ಮಂಜುನಾಥ ಕಾಟ್ಕರ್ ಮುಂತಾದವರು ಭಾಗಿಯಾಗಿದ್ದರು.