ದೇವದುರ್ಗ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಂಟಕವಾಗಿರುವ ನೀಟ್ ಸೋರಿಕೆ ಹಗರಣ ವಿರುದ್ಧ ಎಸ್‌ಎಫ್‌ಐ ನೇತೃತ್ವದಲ್ಲಿ ಜಾಲಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.

ಬಹಿರಂಗ ಸಭೆಯನ್ನು ಉದ್ದೇಶಿಸಿ ಎಸ್‌ಎಫ್‌ಐ ಸಂಘಟನೆ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮಾತನಾಡಿ ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಅವ್ಯವಸ್ಥೆ ಪ್ರಕರಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಪ್ರಕರಣ ಹೊಣೆ ಹೊತ್ತು ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಸಾದ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರು ನಾಡ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ಕೊಡಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ರದ್ದುಪಡಿಸಿ, ನೀಟ್ ಪರೀಕ್ಷೆಯನ್ನು ಬ್ಯಾನ್‌ ಮಾಡಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ಸಂತೋಷ ತ್ಯಾಪ್ಲಿ, ನರಸಣ್ಣ ನಾಯಕ, ಶಬ್ಬೀರ್‌ ಜಾಲಹಳ್ಳಿ, ಮೌನೇಶ ಜಾಲಹಳ್ಳಿ, ಹನುಮಂತ ಮಡಿವಾಳ, ರಿಯಾಜ್, ಹನುಮಂತ ಗುರಿಕಾರ, ಬಸವರಾಜ ಲಿಂಗದಹಳ್ಳಿ, ಮೈಬೂ ಕುರಕುಂದಿ ಹಾಗೂ ಇತರರು ಇದ್ದರು.