ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ಮರಗಳ ಹನನ ಮಾಡಿ, ನೂರಾರು ಎಕರೆ ಜಾಗದಲ್ಲಿ ನಿವೇಶನಗಳ ಬೃಹತ್ ಪ್ರಾಜೆಕ್ಟ್ ರೂಪುಗೊಳ್ಳುತ್ತಿದೆ. ಜಮ್ಮಾ ಬಾಣೆ ಜಾಗವನ್ನೇ ಅಕ್ರಮವಾಗಿ ಭೂ ಪರಿವರ್ತನೆ ಮಾಡಿಸಿ, ಭಾರೀ ಪ್ರಮಾಣದ ಮರಗಳನ್ನು ಕಡಿಯಲಾಗಿದ್ದು, ಬಡವರಿಗೆ ಮನೆ ನೀಡುವ ನೆಪದಿಂದ ಆಂಧ್ರ ಮೂಲದ ವ್ಯಕ್ತಿ ಗೃಹ ಮಂಡಳಿ ಜೊತೆ ಶಾಮೀಲಾಗಿ ಭಾರೀ ಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಕೊಡಗು ಮತ್ತು ಕಾವೇರಿ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.ಕೊಡಗಿನ ಅಸ್ತಿತ್ವಕ್ಕೆ ಗಂಭೀರ ದುಷ್ಪರಿಣಾಮ ಬೀರುವ ಈ ಬೃಹತ್ ಯೋಜನೆಯನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕೆಂದು ಒತ್ತಾಯಿಸಿ, ವೇದಿಕೆ ವತಿಯಿಂದ ಬುಧವಾರ ಸ್ಥಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಕೆ.ನಿಡುಗಣೆ ಗ್ರಾಮದ ಸುಂದರ ಪ್ರಕೃತಿ ತಾಣವೊಂದು, ಇದೀಗ ಅಕ್ರಮ ಯೋಜನೆಗಳಿಗೆ ಬಲಿಯಾಗಿದೆ. ಕ್ಷೇತ್ರದ ಶಾಸಕರು ಜಿಲ್ಲೆಯ ಹಿತದೃಷ್ಟಿಯಿಂದ ಕೂಡಲೇ ಮಧ್ಯ ಪ್ರವೇಶಿಸಿ ಹೋರಾಟಗಾರರೊಂದಿಗೆ ಕೈಜೋಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾನೂನು ಪ್ರಕಾರ ಜಮ್ಮಾ ಬಾಣೆ ಜಾಗವನ್ನು ಪರಿವರ್ತನೆ ಮಾಡುವಂತಿಲ್ಲ. ಆಂಧ್ರದ ಉದ್ಯಮಿಯೊಬ್ಬರು ಮೂರ್ನಾಲ್ಕು ವರ್ಷಗಳಿಂದ ಈ ಜಾಗದಲ್ಲಿ ನೂರಾರು ಮರಗಳನ್ನು ಕಡಿದು ನಾಶಪಡಿಸಿದ್ದು, ಬಡವರಿಗೆ ಮನೆ ಒದಗಿಸುವ ನೆಪವೊಡ್ಡಿ ಗೃಹಮಂಡಳಿ ಜೊತೆ ಶಾಮೀಲಾಗಿ ಕಾನೂನು ಬಾಹಿರ ಕಾಮಗಾರಿ ನಡೆಸಿದ್ದಾರೆ. ಮೂಡಾ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಾ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕೊಡಗು ಮತ್ತು ಕಾವೇರಿ ರಕ್ಷಣಾ ವೇದಿಕೆ ಸಂಚಾಲಕ ಕರ್ನಲ್ ಮುತ್ತಣ್ಣ ಮಾತನಾಡಿ ಮಡಿಕೇರಿಗೆ ನೀರುಣಿಸುವ ಕೂಟುಹೊಳೆಯ ಜಲಾನಯನ ಪ್ರದೇಶವಾದ ಈ ಜಾಗದಲ್ಲಿ ಹರಿವ ನೀರಿಗೆ ತಡೆಯೊಡ್ಡಲಾಗಿದೆ. ಬದಲಿಗೆ, ನಿವೇಶನಗಳಿಂದ ಬರುವ ಕೊಳಕು ನೀರನ್ನು ಹೊಳೆಗೆ ಹರಿಸಲು ಯೋಜಿಸಲಾಗಿದೆ. ಯೋಜನೆ ಕೈಬಿಡುವವರಗೂ ಹೋರಾಟ ಮೂಂದುವರೆಯಲಿದ್ದು, ಅಕ್ರಮದ ವಿರುದ್ಧ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದ ಕರ್ನಲ್ ಮುತ್ತಣ್ಣ , ಸರ್ಕಾರವು ತಕ್ಷಣ ಯೋಜನೆ ರದ್ದುಗೊಳಿಸದಿದ್ದರೆ ನ್ಯಾಯಾಲಯದ ಕದ ತಟ್ಟುತ್ತೇವೆ ಎಂದರು.
ಕೊಡಗು ಅಭಿವೃಧ್ಧಿ ಸಮಿತಿ ಅಧ್ಯಕ್ಚ ಪ್ರಸನ್ನ ಭಟ್ ಮಾತನಾಡಿ, ಕೆ ನಿಡುಗಣೆಯಲ್ಲಿ ಆರಂಭವಾಗಿರುವ ಈ ಅಕ್ರಮ ಯೋಜನೆಯ ವಿರುದ್ಧ ಸಾಂಕೇತಿಕ ಹೋರಾಟ ಆರಂಭವಾಗಿದ್ದು, ಕೊಡಗಿನ ಪರಿಸರಕ್ಕೆ ಧಕ್ಕೆಯುಂಟು ಮಾಟುವ ಎಲ್ಲ ಯೋಜನೆಗಳನ್ನು ವಿರೋಧಿಸಿ ಹೋರಾಟ ಮುಂದುವರೆಸಲಾಗುವದು ಎಂದರು.
ಸ್ಥಳೀಯರು ಇ-ಸ್ವತ್ತಿಗೆ ಅರ್ಜಿ ಹಾಕಿದರೆ ಸಬೂಬು ಹೇಳುವ ಮತ್ತು ವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳು, ಕೆ ನಿಡುಗಣೆಯ ಈ ಅಕ್ರಮ ಯೋಜನೆಗಾಗಿ ಒಂದೇ ತಿಂಗಳಲ್ಲಿ ನೂರಾರು ಇ-ಸ್ವತ್ತು ಅರ್ಜಿಗಳನ್ನು ವಿಲೇವಾರಿ ಮಾಡಿದ್ದು ಹೇಗೆ? ಎಂದು ಸ್ಥಳೀಯರು ಪ್ರಶ್ನಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ಯಾವೊಬ್ಬ ಪ್ರತಿನಿಧಿಯೂ ಧ್ವನಿಯೆತ್ತದಿರುವುದನ್ನು ಸ್ಥಳೀಯರು ಖಂಡಿಸಿದ್ದಾರೆ. ಪ್ರತಿಭಟನೆಯಲ್ಲಿ ಪ್ರಮುಖರಾದ ಶಾನ್ ಬೋಪಯ್ಯ, ಅರುಣ್ ಚೆಂಗಪ್ಪ, ಫ್ರಾಂಕ್ಲಿನ್, ಶಿವಶಂಕರ್, ಫೃಥ್ವಿ ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು.