ಅಧಿಕಾರಿ, ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಿ

| Published : Nov 06 2024, 12:35 AM IST

ಸಾರಾಂಶ

ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆ

ಗದಗ: ಪ್ರತಿದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿಗಳು, ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ರವಿ ಗುಂಜೀಕರ ನೇತೃತ್ವದಲ್ಲಿ ಸರ್ಕಾರಿ ನೌಕರರು ಜಿಲ್ಲಾಧಿಕಾರಿ ಗೋವಿಂದರೆಡ್ಡಿಗೆ ಮಂಗಳವಾರ ಮನವಿ ಸಲ್ಲಿಸಿದರು.

ನ. 4 ರಂದು ಗಜೇಂದ್ರಗಡ ಶಹರದಲ್ಲಿ ರಾಜ್ಯದ ರೈತರ, ದೇವಾಲಯ ಹಾಗೂ ಮಠ-ಮಾನ್ಯಗಳ ಆಸ್ತಿಗಳ ಮೇಲೆ ವಕ್ಫ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ರಾಜ್ಯ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆ ಅಂಗವಾಗಿ ಮಾಜಿ ಸಚಿವ, ಮಾಜಿ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲು ಕಚೇರಿ ಮುಂದೆ ಬಂದು ಸರ್ಕಾರಿ ಕರ್ತವ್ಯ ನಿರತ ತಹಸೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಕಿರಣಕುಮಾರ ಕುಲಕರ್ಣಿಗೆ ಸಾರ್ವಜನಿಕರ ಎದುರಿಗೆ ವೈಯಕ್ತಿಕವಾಗಿ ಏಕವಚನದಿಂದ ನಿಂದಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ, ನೌಕರರಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತೊಂದರೆಯುಂಟು ಮಾಡಿದ್ದಾರೆ.

ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳಿಗೆ, ನೌಕರರಿಗೆ ತೊಂದರೆ ನೀಡಿ, ನಿಷ್ಪಕ್ಷಪಾತವಾಗಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ರೀತಿಯಲ್ಲಿ ನಡೆದುಕೊಂಡಿದ್ದು ಖೇದಕರ ವಿಷಯವಾಗಿದ್ದು, ಪ್ರತಿ ದಿನ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಇಲಾಖೆಯ ಅಧಿಕಾರಿ, ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ರವಿ ಗುಂಜೀಕರ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಬಳ್ಳಾರಿ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ವಿ.ಎಂ. ಹಿರೇಮಠ, ಎಸ್.ಆರ್. ಬಂಡಿ, ಡಿ.ಟಿ.ವಾಲ್ಮೀಟಿ, ಅರುಣ ಮಂಟೂರ, ಕೆ.ಬಿ. ಕೊಣ್ಣೂರ, ಎಸ್.ಎಂ. ಹಿರೇಮಠ, ಎಂ.ಎ.ನದಾಫ್, ಎನ್.ಬಿ. ದೊಡ್ಡಮನಿ, ಸಿ.ಎಸ್. ಮಠದ, ಪಿ.ಬಿ. ಮುಧೋಳಮಠ, ಪಿ.ಎಫ್. ಅಗಸಿಮನಿ ಸೇರಿದಂತೆ ಸಂಘದ ಜಿಲ್ಲಾ ಪದಾಧಿಕಾರಿಗಳು, ಸದಸ್ಯರು, ಸರ್ಕಾರಿ ನೌಕರರು ಹಾಜರಿದ್ದರು.