ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ರಾಜ್ಯದಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರಸಗೊಬ್ಬರಗಳ ಬೆಲೆಯು ಅತ್ಯಂತ ದುಬಾರಿಯಾಗಿರುವುದು ರೈತರಿಗೆ ತೀವ್ರ ತೊಂದರೆಯಾಗಿದೆ. ಕೇಂದ್ರ ಸರ್ಕಾರ ಈ ಕೂಡಲೇ ರಸಗೊಬ್ಬರಗಳನ್ನು ರಿಯಾಯ್ತಿ ದರದಲ್ಲಿ ರೈತರಿಗೆ ನೀಡಲು ಕ್ರಮಕೈಗೊಳ್ಳಬೇಕು. ಹನಿ ನೀರಾವರಿ ಯಾಂತ್ರೀಕರಣ ಸಲಕರಣೆಗಳ ಮೇಲೆ ವಿಧಿಸುತ್ತಿರುವ ಜಿ.ಎಸ್.ಟಿ ತೆರಿಗೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಆಗ್ರಹಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈನೋದ್ಯಮ ತೀವ್ರವಾಗಿ ಕುಸಿದು ಹಾಲಿನ ಉತ್ಪಾದನೆ ಕುಂಠಿತವಾಗಿದೆ. ಉತ್ಪಾದನಾ ವೆಚ್ಚ ಅಧಿಕವಾಗಿರುವುದು ರೈತರು ಹೈನೋದ್ಯಮದಿಂದ ದೂರ ಸರಿಯಲು ಕಾರಣವಾಗುತ್ತಿದೆ. ಪಶು ಆಹಾರಗಳ ಬೆಲೆ ಅತ್ಯಂತ ದುಬಾರಿಯಾಗಿರುವುದು, ಉತ್ಪಾದನಾ ವೆಚ್ಚ ಹೆಚ್ಚಾಗಲು ಕಾರಣವಾಗಿರುವುದು ಪ್ರಮುಖ ಕಾರಣವಾಗಿದೆ. ರಾಜ್ಯ ಸರ್ಕಾರವು, ಪಶು ಆಹಾರದ ಅವೈಜ್ಞಾನಿಕ ದರ ಏರಿಕೆಯನ್ನು ನಿಯಂತ್ರಿಸಿ ಸ್ಪಷ್ಟ ನೀತಿಯನ್ನು ಜಾರಿಗೊಳಿಸುವುದು ಹಾಗೂ ಪಶು ಆಹಾರವನ್ನು ಶೇ. 50ರ ರೀಯಯ್ತಿ ದರದಲ್ಲಿ ಹಾಲು ಉತ್ಪಾದಕ ಸಹಾಕರ ಸಂಘಗಳ ಮೂಲಕ ನೀಡಲು ಕ್ರಮವಹಿಸ ಬೇಕು ಎಂದರು.

ನಕಲಿ ಕೀಟ ನಾಶಕಗಳು, ನಕಲಿ ಬಿತ್ತನೆ ಬೀಜ ಮತ್ತು ನಕಲಿ ರಸಗೊಬ್ಬರಗಳ ಮಾರಾಟವನ್ನು ಕಟ್ಟುನಿಟ್ಟಿನ ಕ್ರಮಗಳ ಮೂಲಕ ನಿಯಂತ್ರಣ, ದುಬಾರಿ ಬೆಲೆಯಲ್ಲಿ ಮಾರಾಟವಾಗುವುದನ್ನು ತಡೆಯುವುದು. ಅದೇ ರೀತಿ ಗುಣಮಟ್ಟದ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟ ನಾಶಕಗಳನ್ನು ಸಹಾಕರಿ ಸಂಘ ಮೂಲಕ ಮಾರಾಟ ಮಾಡಲು ಕ್ರಮವಹಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ವಿಭಾಗಗಳಲ್ಲಿ ನಿರುದ್ಯೋಗಿ ಯುವಕರನ್ನು, ರೈತ ಸಂಪರ್ಕ ಕೇಂದ್ರಗಳಲ್ಲಿ ಸಲಹೆಗಾರನ್ನಾಗಿ ನೇಮಿಸಿಕೊಂಡು ಕಾಲ ಕಾಲಕ್ಕೆ ರೈತರಿಗೆ ಮಾರ್ಗದರ್ಶನ ನೀಡಲು ಕ್ರಮವಹಿಸುವುದು. ರಸಗೊಬ್ಬರಗಳ ಬೆಲೆಯು ಅತ್ಯಂತ ದುಬಾರಿಯಾಗಿ ರೈತರಿಗೆ ಉತ್ಪದಾನ ವೆಚ್ಚ ಹೆಚ್ಚಾಗಿ ನಷ್ಟದಲ್ಲಿ ಕೃಷಿ ಮಾಡುವಂತಾಗಿದೆ. ರಸಗೊಬ್ಬರ ಕೊಳ್ಳುವಾಗ ಒಂದರ ಜೊತೆಗೆ ಇನ್ನೊಂದನ್ನು ಕೊಳ್ಳಲು ನಿಗದಿ ಮಾಡಿರುವುದುರಿಂದ ಈಗಾಲೇ ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ, ಅನಾವಶ್ಯಕವಾಗಿ ಹೊರೆಯಾಗುತ್ತಿದೆ. ಈ ನೀತಿಯನ್ನು ಕೊಡಲೇ ಕೈಬಿಡಬೇಕು. ಮೂರು ತಿಂಗಳಿಂದ ರೈತರ ಭೂಮಿಗಳ ಸರ್ವೆ ಕಾರ್ಯ ಸ್ಥಗಿತಗೊಂಡಿದ್ದು, ಈ ಕೂಡಲೇ ಸರ್ವೆ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶ್ರೀನಿವಾಸ್, ಉಪಾಧ್ಯಕ್ಷ ಕೆ.ವಿ. ಚದ್ರಪ್ಪ, ನಿರ್ದೇಶಕರಾದ ಜಿ. ವೆಂಕಟೇಶಪ್ಪ, ಬಿ.ವಿ. ಆದಿನಾರಾಯಣಪ್ಪ, ಎಂ. ವೆಂಕಟೇಶ್, ಎಂ. ರಾಮಾಂಜಿನಪ್ಪ, ಎಸ್.ವಿ. ಅಶ್ವತ್ಥಪ್ಪ, ರಾಮಚಂದ್ರ, ಎ.ಎನ್. ವೆಂಕಟರಾಮ್, ಸಿ.ಮುನಿಕೃಷ್ಣ, ಕೆ.ವಿ. ದೇವರಾಜ್, ಕೆ.ವಿ.ನಾರಾಯಣಸ್ವಾಮಿ ಇದ್ದರು.


ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿದರು.