ಮಾನವೀಯತೆ, ಕೌಶಲ್ಯಾಧಾರಿತ ಶಿಕ್ಷಣ ನೀಡಿ

| Published : Jan 08 2024, 01:45 AM IST

ಸಾರಾಂಶ

ಶಿಕ್ಷಣದ ಜೊತೆಗೆ ಸನಾತನ ಸಂಸ್ಕೃತಿ, ಉತ್ತಮ ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.

ಕನ್ನಡಪ್ರಭ ವಾರ್ತೆ ಗುತ್ತಲ

ಶಿಕ್ಷಣದ ಜೊತೆಗೆ ಸನಾತನ ಸಂಸ್ಕೃತಿ, ಉತ್ತಮ ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ಆರ್.ಕೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಯು.ಆರ್.ಕೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಶ್ರದ್ಧೆಯಿಂದ ಕಲಿತರೆ ಯಾವುದೇ ವಿಷಯಗಳು ಕಠಿಣವಲ್ಲ, ಬಡತನವನ್ನು ಎದುರಿಸಿ ಉನ್ನತ ಶಿಕ್ಷಣವನ್ನು ಪಡೆದವರನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.

ಶಿಕ್ಷಣವೆಂದರೆ ಮಕ್ಕಳನ್ನು ಕೇವಲ ಅಂಕಗಳಿಗೆ ಸಿಮಿತಗೊಳಿಸದೆ ಮಕ್ಕಳಿಗೆ ಮಾನವೀಯತೆ, ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು ಮಕ್ಕಳಲ್ಲಿ ಹಲವು ರೀತಿಯ ಪ್ರತಿಭೆಗಳಿರುತ್ತವೆ. ಅಂತಹ ಸುಪ್ತ ಪ್ರತಿಭೆಗಳನ್ನು ಪಠ್ಯಪುಸ್ತಕದ ಶಿಕ್ಷಣದೊಂದಿಗೆ ಮಾರ್ಗದರ್ಶನ ನೀಡುವ ಮೂಲಕ ಅರಳಿಸುವ ಕಾರ್ಯ ಶಿಕ್ಷಕರದ್ದಾಗಿರುತ್ತದೆ, ಅಲ್ಲದೇ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳಸುವ ಕಾರ್ಯ ಸಾಮಾನ್ಯವಲ್ಲ ಎಂದರು.

ವಲಯ ಶಿಕ್ಷಣ ಸಯೋಜಕ ಎಂ.ಎಫ್. ಭಗವಂತಗೌಡ್ರ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರವು ಸಹ ಮಹತ್ವದ್ದಾಗಿದೆ. ಉತ್ತಮವಾದ ವಿದ್ಯೆಯ ಜೊತೆಗೆ ಮನೆಯಲ್ಲಿ ಉತ್ತಮ ಮೌಲ್ಯಗಳನ್ನು ಮತ್ತು ಉತ್ತಮ ಸಂಸ್ಕೃತಿಯನ್ನು ಹೊಂದುವಂತಹ ಗುಣಗಳನ್ನು ಬೆಳಸುವ ನಿಟ್ಟಿನಲ್ಲಿ ಪಾಲಕರ ಪಾತ್ರ ಅವಶ್ಯವಾಗಿದೆ ಎಂದರು.

ಬೆಳಗಾವಿ ಆರ್ಯುವೇದ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ವೀಣಾ ತೊಣ್ಣಿ ಮಾತನಾಡಿ, ಉತ್ತಮ ಸಂಸ್ಥೆ ನಿರ್ಮಾಣ ಮಾಡುವಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಆಡಳಿತ ಮಂಡಳಿಯ ಪಾತ್ರ ಮಹತ್ವದ್ದಾಗಿದೆ. ಸಂಸ್ಥೆಯಲ್ಲಿ ಕಲಿತ ಗ್ರಾಮೀಣ ಭಾಗದ ಮಕ್ಕಳು ಉನ್ನತ ವ್ಯಾಸಂಗದೊದಿಗೆ ವೈದ್ಯೆಕೀಯ, ಅಭಿಯಂತರ ಸೇರಿದಂತೆ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವುದು ಹೆಮ್ಮೆಯ ವಿಷಯ ಎಂದರು.

ಗೆಳೆಯರ ಬಳಗ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಉಷಾರಾಣಿ ಕೆ.ಎಚ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 19 ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಗೆಳೆಯರ ಬಳಗ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಕಠಾರಿ ಎಚ್. ನಾಯ್ಕ, ಉಪಾಧ್ಯಕ್ಷ ಕೃಷ್ಣಾ ನಾಯ್ಕ, ಡಾ. ಸಂತೋಷ ಕೆ. ನಾಯ್ಕ್, ಯುಆರ್‌ಕೆ ಕಾಲೇಜಿನ ಪ್ರಾಂಶುಪಾಲ ಅನಿಲಕುಮಾರ ಹೊಸಮನಿ, ಆರ್.ಕೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಂದನಾ ಜೋಗಿ ಹಾಗೂ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮವನ್ನು ಉಪನ್ಯಾಸಕಿ ಅಶ್ವಿನಿ ಸೋಮಣ್ಣನವರ, ಮಾಲತೇಶ ಲಮಾಣಿ ನಿರೂಪಿಸಿದರು.