ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುವವರಿಗೆ ಪಿಡಿಒಗಳು ಅಗತ್ಯ ಕುಡಿಯುವ ನೀರು, ನೆರಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ತಾಪಂ ಇಒ ವೆಂಕಟೇಶ ವಂದಾಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುವವರಿಗೆ ಪಿಡಿಒಗಳು ಅಗತ್ಯ ಕುಡಿಯುವ ನೀರು, ನೆರಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ತಾಪಂ ಇಒ ವೆಂಕಟೇಶ ವಂದಾಲ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಪಂ ವ್ಯಾಪ್ತಿಯ ಅಕ್ಕನಾಗಮ್ಮ ಕೆರೆಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಅಮೃತ ಸರೋವರ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ರೋಜಾಗಾರ ದಿವಸ ಆಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕೂಲಿಕಾರರು ಬೆಳಗ್ಗೆ ಬೇಗ ಕೆಲಸಕ್ಕೆ ಹಾಜರಾಗಿ ಬಿಸಿಲಿನ ತಾಪ ಹೆಚ್ಚುವುದರೊಳಗೆ ಕೆಲಸ ಮುಗಿಸಿ ಎಂದು ಸಲಹೆ ನೀಡಿದರು.ಕೂಲಿಕಾರರೊಂದಿಗೆ ಸಂವಾದ ನಡೆಸಿ ಮನರೇಗಾ ಯೋಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಆಗಮಿಸುವಂತೆ ಪ್ರೇರೇಪಿಸಿ, ಕೆಲಸದ ಬೇಡಿಕೆ ಪಡೆದು ಉದ್ಯೋಗ ಒದಗಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯೋಜನೆಯ ಉದ್ದೇಶ, ಕೂಲಿಕಾರರ ಹಕ್ಕುಗಳು, ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಕೆಲಸದ ಸ್ಥಳದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಎನ್.ಎಂ.ಎಂ.ಎಸ್.ಫೇಸ್ ಅಥೆಂಟಿಕೇಶನ್ ಪರಿಶೀಲನೆ ನಡೆಸಿ, ಕೂಲಿಕಾರರ ಹಾಜರಾತಿ ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮತ್ತು ಕಾಯಕ ಬಂಧುಗಳಿಗೆ ಸೂಚಿಸಿದ ಅವರು ಕೂಲಿಕಾರರೊಂದಿಗೆ ತಾವು ಕೆಲ ಹೊತ್ತು ಕೆಲಸ ಮಾಡಿ ಗಮನ ಸೆಳೆದರು.ಪಿಡಿಒ ಜೆ.ಎಸ್.ದೇವರನಾವದಗಿ ಅವರು, ಅಕ್ಕನಾಗಮ್ಮ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ 52 ಮಹಿಳೆಯರು, 8 ಪುರುಷರು ಸೇರಿ ಒಟ್ಟು 60 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ತಾಪಂ ಯೋಜನಾಧಿಕಾರಿ ಎಂ.ಬಿ.ಸೊನ್ನದ, ಪಿಡಿಒ ಜೆ.ಎಸ್.ದೇವರನಾವದಗಿ, ಐಇಸಿ ಸಂಯೋಜಕ ಮಡಿವಾಳಪ್ಪ ಬಿರಾದಾರ, ವಲಯ ಮೇಲ್ವಿಚಾರಕಿ ಶಾಂತಮ್ಮ ಸಾಸನೂರ, ಯುವವೃತ್ತಿಪರ ವಿಜಯಲಕ್ಷ್ಮೀ ಗುಮ್ಮಶೆಟ್ಟಿ, ತಾಂತ್ರಿಕ ಸಹಾಯಕ ಚಂದ್ರಶೇಖರ ಆಡಿನ,ನರೇಗಾ ಆಡಳಿತ ಸಹಾಯಕಿ ಅಶ್ವಿನಿ ದೇಸಾಯಿ, ಗ್ರಾಪಂ ಸಿಬ್ಬಂದಿ, ಕೂಲಿಕಾರರು ಇದ್ದರು.ಕಾಮಗಾರಿ ಗುಣಮಟ್ಟ ಕಾಪಾಡುವ ಜೊತೆಗೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು. ತಮಗೆ ನೀಡಿರುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಗ್ರಾಮದಲ್ಲಿನ ಇತರ ಕೂಲಿಕಾರರು, ತಮ್ಮ ಮನೆಯ ಸುತ್ತಮುತ್ತ ಹಾಗೂ ತಮ್ಮ ಸಂಬಂಧಿಕರಿಗೂ ಮನರೇಗಾ ಯೋಜನೆಯಡಿ ಉದ್ಯೋಗಾವಕಾಶ ದೊರೆಯುವ ಕುರಿತು ಜಾಗೃತಿ ಮೂಡಿಸಬೇಕು.
- ವೆಂಕಟೇಶ ವಂದಾಲ, ತಾಪಂ ಇಒ