ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿಯೇ ಗುಣಾತ್ಮಕ ಹಾಗೂ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಅಗತ್ಯ ಕಲಿಕಾ ಸಾಮರ್ಥ್ಯಗಳನ್ನು ಬೆಳೆಸಬೇಕು ಎಂದು ಅಜಿಂ ಜಿ ಫೌಂಡೇಶನ್‌ ತರಬೇತುದಾರ ಮರೆಪ್ಪ ಹಾದಿಮನಿ ಹೇಳಿದರು.

ತಾಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರ 1ರಲ್ಲಿ ಗುರುವಾರ ಅಜಿಂ ಜಿ ಫೌಂಡೇಶನ್‌ನಿಂದ ಹಮ್ಮಿಕೊಂಡಿದ್ದ ಹಿರೇಮುರಾಳ ವಲಯದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಶಾಲಾ ಪೂರ್ವ ಶಿಕ್ಷಣ ತರಬೇತಿ ಹಾಗೂ ಶೈಕ್ಷಣಿಕ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಂಗನವಾಡಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುವಂತೆ ಕಾರ್ಯಕರ್ತೆಯರು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು.ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜತೆಗೆ ಭಾವನಾತ್ಮಕ ಬೆಳವಣಿಗೆ, ಸಾಮಾಜಿಕ ಹೊಂದಾಣಿಕೆ ಹಾಗೂ ಕಲಿಕೆಯ ಆಸಕ್ತಿಯನ್ನು ಬೆಳೆಸುವುದು ಅಗತ್ಯ. ಅಂಗನವಾಡಿಯಲ್ಲಿಯೇ ಮಕ್ಕಳಿಗೆ ಶಾಲಾ ಪೂರ್ವ ಸಿದ್ಧತೆ ಮಾಡಿಕೊಟ್ಟರೆ, ಮುಂದಿನ ಹಂತದ ಶಿಕ್ಷಣವನ್ನು ಅವರು ಸುಲಭವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಮನೆ, ಕುಟುಂಬ, ಗ್ರಾಮ, ಜಾತ್ರೆ, ಗಿಡ-ಮರಗಳು, ಪ್ರಾಣಿ-ಪಕ್ಷಿಗಳು ಸೇರಿದಂತೆ ಮಕ್ಕಳಿಗೆ ಪರಿಚಿತ ವಿಷಯಗಳನ್ನು ಆಧರಿಸಿ ವಾರದ ಚಟುವಟಿಕೆಗಳನ್ನು ರೂಪಿಸಿ ಕಲಿಕೆ ನೀಡಬೇಕು. ಇದರಿಂದ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಪ್ರಶ್ನಿಸುವ, ಆಲೋಚಿಸುವ ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಸಿದ್ದಮ್ಮ ಪಾಟೀಲ, ಆಂಜನೇಯ ಪವಾರ, ಯಮನಪ್ಪ ಚಲವಾದಿ, ವಿರೇಶ ಚಲವಾದಿ, ಮೌನೇಶ ಚಲವಾದಿ, ಮಂಜು ಚಲವಾದಿ ಸೇರಿ ಹಿರೇಮುರಾಳ ವಲಯದ ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ ನಾಗರತ್ತಿ, ರೇಣುಕಾ ಹಡಪದ, ಸರಸ್ವತಿ ಮದರಕಿ, ಶಂಕುತಲಾ ಮುರಾಳ, ಈರಮ್ಮ ಮೇಟಿ, ಕಮಲಾಕ್ಷಿ ಬಿರಾದಾರ, ಲಕ್ಷ್ಮೀಬಾಯಿ ಗುಡಗುಂಟಿ, ಗುಂಡಮ್ಮ ಗುರಿಕಾರ, ಶಶಿಕಲಾ ಮಾದರ, ಜಯಶ್ರೀ ಜೀರಲಬಾವಿ, ಬಸಮ್ಮ ರೆವಡಿಹಾಳ, ಇಂದಿರಾ ಕುಂಬಾರ, ಶಾಂತಾ ಈಳಗೇರ, ಸಾವಿತ್ರಿ ನಾಲತವಾಡ, ಬಸಮ್ಮ ಸೋಮನಾಳ, ಬಸಮ್ಮ ಕಡಿ, ಅಂಜನಾ ಬಡಿಗೇರ, ರೇಣುಕಾ ಗುಂಡಕನಾಳ, ಮುದಕಮ್ಮ ವಾಲಿಕಾರ, ವಿಜಯ ಪ್ಯಾಟಿ, ಮಹಾದೇವಿ ತುಂಬಗಿ ಹಾಗೂ ಸಹಾಯಕಿಯರಾದ ಗೌರಮ್ಮ ನಾಲತವಾಡ, ಶ್ಯಾಂಭವಿ ಪಾಟೀಲ, ಕವಿತಾ ಸೋಮನಾಳ ಸೇರಿ ಅಂಗನವಾಡಿ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.