ಸಾರಾಂಶ
ಹಾನಗಲ್ಲ: ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗದಂತೆ ಕಾಳಜಿ ವಹಿಸಬೇಕು. ಲಭ್ಯ ಸಂಪನ್ಮೂಲ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಂತೆ ಶಾಸಕ ಶ್ರೀನಿವಾಸ ಮಾನೆ ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಚನ್ನಬಸಪ್ಪ ಕುಮ್ಮೂರ ಅವರಿಗೆ ಸೂಚಿಸಿದರು.ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ. ಹೀಗಾಗದಂತೆ ಉಪನ್ಯಾಸಕರು ಎಚ್ಚರಿಕೆ ವಹಿಸಬೇಕು. ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಬೇಡ ಎಂದು ಹೇಳಿದ ಅವರು ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಪಟ್ಟಿ ಮಾಡಿ ಒಂದು ಕೋಟಿ ರು. ವೆಚ್ಚದ ಸಮಗ್ರವಾದ ಪ್ರಸ್ತಾವನೆ ಸಿದ್ಧಪಡಿಸಿ. ಕಾಲೇಜು ಆರಂಭವಾದಾಗಿನಿಂದ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಅನೇಕರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನೆಲ್ಲ ಸಂಪರ್ಕಿಸಿ ಅವರ ಸಹಾಯ, ಸಹಕಾರ ಪಡೆಯುವ ಕೆಲಸವಾಗಬೇಕಿದೆ ಎಂದರು.ಇದೇ ಸಂದರ್ಭದಲ್ಲಿ ಹಾನಗಲ್ ಹೊರತು ಪಡಿಸಿದರೆ ಹುಬ್ಬಳ್ಳಿ ಸೇರಿದಂತೆ ಇನ್ನಿತರ ಡಿಪೋಗಳ ಬಸ್ಗಳು ಕಾಲೇಜಿನ ಎದುರು ನಿಲ್ಲಿಸುತ್ತಿಲ್ಲ ಎಂದು ಪ್ರಾಚಾರ್ಯ ಚನ್ನಬಸಪ್ಪ ಕುಮ್ಮೂರ ಗಮನ ಸೆಳೆದಾಗ, ಸಭೆಯ ಉಲ್ಲೇಖ ಹಾಕಿ ಹಿರಿಯ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಿರಿ. ಅಗತ್ಯ ಬಿದ್ದರೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡುವ ಭರವಸೆ ನೀಡಿದರು. ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಪಾಂಡುರಂಗ ಪಾರಗಾಂವಕರ್, ಫೈರೋಜ್ ಶಿರಬಡಗಿ, ಇಲಿಯಾಸ್ ಮಿಠಾಯಿಗಾರ, ಸಿಕಂದರ್ ವಾಲಿಕಾರ, ಡಿಗ್ಗಪ್ಪ ಲಮಾಣಿ, ತಮ್ಮಣ್ಣ ವೇದಂಭಟ್ಟನವರ ಇದ್ದರು.