ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫೆ.28 ರಿಂದ ಆರಂಭವಾಗಲಿದ್ದು, ಮಾ.17ರ ವರೆಗೆ ನಡೆಯಲಿದೆ. ದ.ಕ. ಜಿಲ್ಲೆಯ ಒಟ್ಟು 59 ಪರೀಕ್ಷಾ ಕೇಂದ್ರದಲ್ಲಿ 18,745 ಬಾಲಕರು, 18,592 ಬಾಲಕಿಯರು ಸೇರಿ ಒಟ್ಟು 37,337 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ 3,724, ವಾಣಿಜ್ಯ ವಿಭಾಗದಲ್ಲಿ 15,054, ವಿಜ್ಞಾನ ವಿಭಾಗದಲ್ಲಿ 18,559 ವಿದ್ಯಾರ್ಥಿಗಳಿದ್ದಾರೆ. ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 59 ಪರೀಕ್ಷಾ ಕೇಂದ್ರಗಳಿವೆ. ಇದರಲ್ಲಿ 15 ಸರ್ಕಾರಿ ಕಾಲೇಜು, 22 ಅನುದಾನಿತ ಕಾಲೇಜು ಹಾಗೂ 22 ಖಾಸಗಿ ಅನುದಾನ ರಹಿತ ಕಾಲೇಜು ಸೇರಿವೆ. ಮಂಗಳೂರು ತಾಲೂಕಿನಲ್ಲಿ 21, ಬಂಟ್ವಾಳದಲ್ಲಿ 6, ಬೆಳ್ತಂಗಡಿಯಲ್ಲಿ 8, ಪುತ್ತೂರಿನಲ್ಲಿ 5, ಸುಳ್ಯದಲ್ಲಿ 2, ಕಡಬದಲ್ಲಿ 5, ಮೂಡುಬಿದಿರೆಯಲ್ಲಿ 6, ಉಳ್ಳಾಲದಲ್ಲಿ 4 ಹಾಗೂ ಮೂಲ್ಕಿಯಲ್ಲಿ 2 ಪರೀಕ್ಷಾ ಕೇಂದ್ರಗಳಿವೆ.ಎಲ್ಲ ಪಿಯು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಅದರ ಕಾರ್ಯನಿರ್ವಹಣೆ ಬಗ್ಗೆ ಶುಕ್ರವಾರ ದೃಢೀಕರಣವನ್ನೂ ಮಾಡಲಾಗಿದೆ. ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪರೀಕ್ಷಾ ಕೇಂದ್ರಗಳ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸಂಪೂರ್ಣ ವಿಡಿಯೋ ಚಿತ್ರಣ ಜಿಲ್ಲಾ ಪಂಚಾಯತ್ ನಲ್ಲಿ ಅಧಿಕಾರಿಗಳಿಗೆ ಲಭ್ಯವಿರಲಿದೆ. ಇದರ ಬಗ್ಗೆ ನಿಗಾ ವಹಿಸಲು 13 ವೀಕ್ಷಣಾಧಿಕಾರಿಗಳನ್ನು ನಿಯೋಜಿಸಲಾಗಿದೆ.ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳ ಸಾಗಾಣಿಕೆಗಾಗಿ ಒಟ್ಟು 16 ಮಾರ್ಗಗಳನ್ನು ಕಲ್ಪಿಸಲಾಗಿದ್ದು, ತ್ರಿಸದಸ್ಯ ಸಮಿತಿ ಸದಸ್ಯರನ್ನು ಒಳಗೊಂಡ 16 ತಂಡಗಳನ್ನು ನಿಯೋಜಿಸಲಾಗಿದೆ. ಜತೆಗೆ ಪರೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿ/ಮುಖ್ಯ ಅಧೀಕ್ಷಕರು/ಉತ್ತರ ಪತ್ರಿಕೆ ಪಾಲಕರು/ಕಚೇರಿ ಅಧೀಕ್ಷಕರು/ಪ್ರಶ್ನೆಪತ್ರಿಕೆ ವಿತರಣೆಗಾಗಿ ತ್ರಿಸದಸ್ಯ ಸಮಿತಿ ನೇಮಕ ಮಾಡಲಾಗಿದೆ. ಪರೀಕ್ಷೆ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂಗೆ ನಿರ್ದೇಶನ ನೀಡಲಾಗಿದೆ.ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯುತ್ತದೆ. ಪರೀಕ್ಷಾ ಮಂಡಲಿಯ ಜಾಲತಾಣದಲ್ಲಿ ಮಕ್ಕಳ ಪರೀಕ್ಷಾ ಸಿದ್ಧತೆಗಾಗಿ ಮಾಹಿತಿಯನ್ನು ಒದಗಿಸಲಾಗಿರುತ್ತದೆ. ಆದರೆ, ಸಾಮಾಜಿಕ ತಾಣಗಳಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಗಳು ಮಾರಾಟವಾಗುತ್ತಿವೆ ಎಂಬ ಸುದ್ದಿಗಳನ್ನು ಹರಡಲಾಗುತ್ತಿದೆ. ಪರೀಕ್ಷಾ ಮಂಡಳಿ ವತಿಯಿಂದ ಈ ಮಾಹಿತಿಯನ್ನು ಪರಿಶೀಲಿಸಲಾಗಿ ಯಾವುದೇ ಪೂರಕ ಪುರಾವೆಗಳು ಇರುವುದಿಲ್ಲ. ಇದು ತಪ್ಪು ಮಾಹಿತಿಯಾಗಿದ್ದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಹುನ್ನಾರವಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರನ್ನು ಗುರುತಿಸಿ ಅಂತಹವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಂತಹ ವದಂತಿಗಳಿಗೆ ಸಾರ್ವಜನಿಕರು, ಪಾಲಕ ಪೋಷಕರು ಮಹತ್ವ ನೀಡದೆ ತಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಪರೀಕ್ಷೆ ಸಿದ್ಧತೆಗೆ ಪ್ರೋಹಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.